ನಿನ್ನೆ ಲಕ್ಕಸಂದ್ರ ಇಂದು ಡೇರಿ ಸರ್ಕಲ್ ನಲ್ಲಿ ಬಹುಮಡಿ ಕಟ್ಟಡ ಕುಸಿತ..!
ರಾಜ್ಯ ರಾಜಧಾನಿಯಲ್ಲಿ ದುರಂತಗಳ ಮೇಲೆ ದುರಂತಗಳು ಸಂಭವಿಸುತ್ತಿವೆ. ನಿನ್ನೆ ಲಕ್ಕಸಂದ್ರದಲ್ಲಿ ಬಹುಮಡಿ ಕುಸಿದಿದ್ದು, ಇಂದು ಡೇರಿ ಸರ್ಕಲ್ ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿದಿದೆ.
ಬೆಂಗಳೂರಿನ ಡೇರಿ ಸರ್ಕಲ್ ಬಳಿ ಇರುವ ಕೆಎಂಎಫ್ ಕ್ವಾಟ್ರಸ್ ಒಳಗಿನ 3 ಅಂತಸ್ತಿನ ಕಟ್ಟಡ ಕುಸಿದಿದೆ. ಇಂದು ಬೆಳಿಗ್ಗೆ 9.30 ಸುಮಾರಿಗೆ ಕಟ್ಟಡ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 50 ವರ್ಷದ ಹಳೆ ಕಟ್ಟಡ ಇದಾಗಿತ್ತು ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಟ್ಟಡ ಬೀಳುವ 5 ನಿಮಿಷಕ್ಕೂ ಮುನ್ನ ಮನೆಯ ಅಕ್ಕಪಕ್ಕದ ಜನ ಹೊರಗೆ ಓಡಿ ಬಂದಿದ್ಧಾರೆ. ತಂದೆ-ತಾಯಿ ಮತ್ತು ಮಗು ಕುಸಿದ ಕಟ್ಟಡದ ಮೇಲೆ ವಾಸವಿದ್ದರು ಎನ್ನಲಾಗುತ್ತಿದೆ. ಕಟ್ಟಡ ಕುಸಿಯುವುದನ್ನು ಅರೆತ ತಂದೆ-ತಾಯಿ ಮಗುವನ್ನು ಕೆಳಗೆ ಎಸೆದಿದ್ದಾರೆ. ಕೆಳಗಿದ್ದ ಸ್ಥಳೀಯರು ಮಗುವನ್ನು ಕ್ಯಾಚ್ ಹಿಡಿದು ರಕ್ಷಣೆ ಮಾಡಿದ್ದಾರೆ. ಸ್ಥಳೀಯರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಎರಡು ಶ್ವಾನಗಳು ಕುಸಿದ ಕಟ್ಟಡದ ಒಳಗೆ ಸಿಲುಕಿ ನರಳುತ್ತಿದ್ದವು. ಅಗ್ನಿ ಶಾಮಕ ದಳದವರು ಶ್ವಾನಗಳನ್ನು ರಕ್ಷಣೆ ಮಾಡಿದ್ದಾರೆ.
ನಿನ್ನೆಯಷ್ಟೇ ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಮನೆ ಕುಸಿದಿತ್ತು. ಮನೆ ಬೀಳುವ ಭೀಕರ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದರು. ಈ ಘಟನೆ ನಡೆದು 24 ಗಂಟೆಯಲ್ಲೇ ಮತ್ತೊಂದು ಕಟ್ಟಡ ಕುಸಿದಿದ್ದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.
ಅಷ್ಟಕ್ಕೂ ನಗರದಲ್ಲಿ ತುಂಬಾ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನ ಬಿಬಿಎಂಪಿ ಮಾಡಬೇಕು. ಆದರೆ ಮನೆ ಮಾಲೀಕರೇ ಮಾಹಿತಿ ನೀಡಿದರೂ ಅಧಿಕಾರಿಗಳು ಮನೆ ತೆರವು ಗೊಳಿಸುವ ಕಾರ್ಯವನ್ನು ತೀವ್ರಗೊಳಿಸುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದರಿಂದ ನಗರದಲ್ಲಿ ಕಟ್ಟಡಗಳು ಕುಸಿಯುತ್ತಿವೆ. ಒಂದು ವೇಳೆ ಕಟ್ಟಡ ಕುಸಿಯುವ ವೇಳೆ ಮನೆಯಲ್ಲಿ ಜನ ವಾಸವಿದ್ದಿದ್ದೇ ಆಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಇದಕ್ಕೆ ನೇರ ಹೊಣೆ ಅಧಿಕಾರಿಗಳಾಗುತ್ತಿದ್ದರು. ಆದರೆ ಅದೃಷ್ಟವಶಾತ್ ಅಂತಹ ಪ್ರಾಣಹಾನಿಗಳು ಸಂಭವಿಸಿಲ್ಲ. ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಅತ್ಯಂತ ಹಳೆಯ ಕಟ್ಟಡಗಳ ಮೇಲೆ ನಿಗಾ ವಹಿಸಬೇಕು. ಅಳವಿನ ಅಂಚಿನಲ್ಲಿರುವ ಪ್ರಾಣಕ್ಕೆ ಕುತ್ತು ತರುವಂತಹ ಹಳೆಯ ಮನೆಗಳ ತೆರವಿಗೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕಿದೆ.