ಎದೆ ತುಂಬಿ ಹಾಡುವೆನು ಸ್ಪರ್ಧಿ ಮನವಿಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿದ ಸರ್ಕಾರ; ಸಮಸ್ಯೆ ಪರಿಹಾರಕ್ಕೂ ಟಿವಿ ವಾಹಿನಿ ವೇದಿಕೆಯೇ ಅಗತ್ಯವೇ?
ಕನ್ನಡದ ಖಾಸಗಿ ಟಿವಿ ಚಾನೆಲ್ನಲ್ಲಿ ಪ್ರಸಾರವಾಗುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಸ್ಪರ್ಧಿ ಸೂರ್ಯಕಾಂತ್ ಅವರ ಮನವಿಗೆ ಸ್ಪಂಧಿಸಿರುವ ಸರ್ಕಾರ ಆತನ ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದೆ. ಆದರೆ, ಸ್ವಾತಂತ್ರ್ಯ ನಂತರದ 75 ವರ್ಷಗಳ ಬಳಿಕ ಆ ಗ್ರಾಮ ಬಸ್ ವ್ಯವಸ್ಥೆಯನ್ನು ಕಂಡಿದ್ದು, ಇಂತಹ ನೂರಾರು ಹಳ್ಳಿಗಳು ಇಂದಿಗೂ ಬಸ್ ವ್ಯವಸ್ಥೆ ಕಂಡಿಲ್ಲ. ಬಸ್ ವ್ಯವಸ್ಥೆ ಬೇಕೆಂದರೂ ಟಿವಿ ವೇದಿಕೆಗಳಲ್ಲಿ ಮನವಿ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಹಳ್ಳಿ ಎಂಬ ಗ್ರಾಮದ ಸೂರ್ಯಕಾಂತ್ ಅವರ ಊರಿಗೆ ಸರ್ಕಾರಿ ಬಸ್ ವ್ಯವಸ್ಥೆಯಿಲ್ಲ. ತಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ನಮ್ಮ ಊರಿನ ಜನರು ಹೋರಾಟ ಮಾಡಿದ್ದಾರೆ. ಆದರೆ ಸರ್ಕಾರ ಬಸ್ ವ್ಯವಸ್ಥೆ ನೀಡಿಲ್ಲ. ನಮ್ಮೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಟಿವಿ ವಾಹಿನಿ ಮೂಲಕ ಸೂರ್ಯಕಾಂತ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು.
ಅವರ ಮನವಿಗೆ ಸ್ಪಂಧಿಸಿರುವ ಸಿಎಂ ಗಡಿಲಿಂಗದಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದು ಸಂತೋಷದ ವಿಚಾರ. ಆದರೆ, ಹೋರಾಟಕ್ಕೂ ಬಗ್ಗದೇ ಇದ್ದ ಸರ್ಕಾರ, ಈಗ ಟಿವಿ ವಾಹಿನಿಯಲ್ಲಿ ಸಮಸ್ಯೆಯನ್ನು ಹೇಳಿಕೊಂಡ ಮೇಲೆ ಸ್ಪಂದಿಸಿದೆ. ಇದು ಸರ್ಕಾರ ನಿರ್ಲಕ್ಷ್ಯ ಧೋರಣೆ ಅಲ್ಲವೇ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಮೊಬೈಲ್ಗೆ ನಮ್ಮ ಊರಿಗೆ ಬಸ್ ಬಿಡಲಾಗಿದೆ ಎಂಬ ಮೆಸೇಜ್ ಬರುತ್ತಿದ್ದಂತೆ ಬಹಳ ಸಂತೋಷ ಆಯ್ತು. ಊರಿಗೆ ಬಸ್ ವ್ಯವಸ್ಥೆ ಒದಗಿಸಿದ್ದಕ್ಕೆ ನಮ್ಮ ಊರಿನ ಜನರು ಖುಷಿಯಾಗಿದ್ದಾರೆ. ಗರ್ಭಿಣಿ ಹೆಣ್ಣುಮಕ್ಕಳು ಆಸ್ಪತ್ರೆಗೆ ಹೋಗಬೇಕು ಎಂದರೆ ತುಂಬ ಕಷ್ಟ ಪಡಬೇಕಾಗಿತ್ತು. ರಸ್ತೆಯಲ್ಲಿಯೇ ಹೆರಿಗೆಯಾದ ಹಲವಾರು ಘಟನೆಗಳಿವೆ. ಎಲ್ಲಾದರೂ ಹೋಗಬೇಕು ಎಂದರೆ ದೇವರಿಗೆ ಶಾಪ ಹಾಕಿ ಹೋಗುತ್ತಿದ್ದೆವು ಎಂದು ಸೂರ್ಯಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಕಲಬುರ್ಗಿ: ಪಾಲಿಕೆ ಅಧಿಕಾರಕ್ಕೆ ಕುದುರೆ ವ್ಯಾಪಾರ; ಸದಸ್ಯರ ಬೆಲೆ ಒಂದು ಕೋಟಿಗೆ ಏರಿಕೆ!