ರಾಜ್ಯದಲ್ಲಿ ಕೊರೊನಾರ್ಭಟ ಹೆಚ್ಚಳ : ತಜ್ಞರ ಮೊರೆ ಹೋದ ಸಿಎಂ..!
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೇ ಹೋದರೆ ವೀಕೆಂಡ್ ಲಾಕ್ ಡೌನ್ ಖಚಿತ ಎನ್ನಲಾಗುತ್ತಿದೆ. ನೆರೆಯ ರಾಜ್ಯ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಕರ್ನಾಟಕದಲ್ಲಿ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೆ ತರಲು ಸರ್ಕಾರ ಚಿಂತಿಸುತ್ತಿದೆ.
ಹೌದು.. ಇಂದು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಿಎಂ ಬಸವರಾಜ ಬೊಮ್ಮಾಯಿ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಮಕ್ಕಳಿಗೆ ಸೋಂಕು ಹಬ್ಬುತ್ತಿರುವ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಆತಂಕ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮೂರನೇ ಅಲೆ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಏರಿಕೆಯಾಗುತ್ತಿರುವ ಸೋಂಕನ್ನು ಈಗಿನಿಂದಲೇ ಕಟ್ಟಿಹಾಕಲು ಸರ್ಕಾರ ಹೆಣಗಾಡುತ್ತಿದ್ದು ಹಂತ ಹಂತವಾಗಿ ನಿಯಂತ್ರಣಕ್ಕೆ ತರಲು ಚಿಂತಿಸುತ್ತಿದೆ.
ಸದ್ಯಕ್ಕೆ ಸರ್ಕಾರ ಯಾವುದೇ ಲಾಕ್ಡೌನ್ ಆದೇಶ ಮಾಡಿಲ್ಲ. ಆದರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್ಡೌನ್ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.57ರಷ್ಟು ಇದ್ದು, ಮುಂದಿನ ಒಂದು ವಾರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಪಾಸಿಟಿವಿಟಿ ಪ್ರಮಾಣ ಶೇ. 2 ಕ್ಕೆ ಏರಿಕೆಯಾದರೆ ತಜ್ಞರ ಶಿಫಾರಸು ಜಾರಿ ಮಾಡಬೇಕು ಎನ್ನಲಾಗಿದೆ.
ಹೀಗಾಗಿ ಸರ್ಕಾರ ಸೋಂಕು ಹರಡುವ ಮುನ್ನ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ. ಜೊತೆಗೆ ಕೆಲಸದ ಸ್ಥಳಗಳಲ್ಲಿ 50% ಅವಕಾಶ, ಮದುವೆಗೆ ನೂರಕ್ಕಿಂತ 40 ಜನರಿಗೆ ಅವಕಾಶ ಹಾಗೂ ಪಬ್, ಬಾರ್, ಜಿಮ್, ಯೋಗ ಕೇಂದ್ರ, ರೆಸಾರ್ಟ್, ದೇವಸ್ಥಾನ, ರ್ಯಾಲಿ, ಸಾರ್ವಜನಿಕ ಸಮಾವೇಶ, ಬೃಹತ್ ಕಾರ್ಯಕ್ರಮ ಸಂಪೂರ್ಣ ಬಂದ್ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆನ್ನಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಗೊಳಿಸುವ ನಿರ್ಧಾರ ಇಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರವಾಗಲಿದೆ.