ರಾಜ್ಯಾದ್ಯಾಂತ ನೈಟ್ ಕರ್ಫ್ಯೂ ಅವಧಿ ಹೆಚ್ಚಳ : 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ!
ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಕಠಿಣ ಕೊರೊನಾ ನಿಯಮಗಳನ್ನು ಜಾರಿಗೆ ತಂದಿದೆ. ರಾಜ್ಯಾದ್ಯಾಂತ ನೈಟ್ ಕರ್ಫ್ಯೂ ಅವಧಿ ಹೆಚ್ಚಳ ಮಾಡಲಾಗಿದ್ದು 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇಂದಿನಿಂದಲೇ ಜಾರಿಗೊಳಿಸಲಾಗಿದೆ.
ಕೊರೊನಾ ನಿಯಂತ್ರಣದ ಬಗ್ಗೆ ಇಂದು ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಕೊರೊನಾ ಮಾರ್ಗಸೂಚಿಯಲ್ಲಿ ಕೆಲ ಕಠಿಣ ಕ್ರಮಗಳನ್ನು ಘೋಷಿಸಿದ್ದಾರೆ. ಇದರನ್ವಯ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರದಲ್ಲಿ ಶನಿವಾರ, ಭಾನುವಾರ ಲಾಕ್ ಡೌನ್ ಘೋಷಣೆಯಾಗಿದೆ.
ರಾಜ್ಯಾದ್ಯಂತ ನೈಟ್ ಕರ್ಫ್ಯೂ ಅವಧಿಯನ್ನು ಹೆಚ್ಚಿಸಲಾಘಿದ್ದು ರಾತ್ರಿ 10ರ ಬದಲಾಗಿ 9 ಗಂಟೆಯಿಂದ 5 ಗಂಟೆಯವರೆಗೆ ಇರಲಿದೆ.
ಇನ್ನೂ ಎರಡು ಹಂತದಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದೆ. 9ರಿಂದ 12 ತರಗತಿಯವರಿಗೆ ಆಗಸ್ಟ್ 23 ರಿಂದ ಹಾಗೂ ಪರಿಸ್ಥಿತಿ ನೋಡಿಕೊಂಡು ಆಗಸ್ಟ್ ಕೊನೆಯ ವಾರದಲ್ಲಿ 1ರಿಂದ 8ನೇ ತರಗತಿಯವರಿಗೆ ಶಾಲೆಗಳನ್ನು ಆರಂಭಿಸಬೇಕೆಂದು ತೀರ್ಮಾನಿಸಲಾಗಿದೆ.
ಇನ್ನೂ ನೆರೆಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು ಗಡಿಭಾಗಗಳಲ್ಲಿ ಪ್ರವೇಶವನ್ನು ವಾರದಲ್ಲಿ ಶನಿವಾರ, ಭಾನುವಾರ ಎರಡು ದಿನ ನಿರ್ಬಂಧಿಸಲಾಗಿದೆ.
ರಾಜ್ಯಾದ್ಯಾಂತ ರಾತ್ರಿ 9ರಿಂದ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಾಗಲಿದ್ದು ಎಲ್ಲವೂ ಬಂದ್ ಆಗಲಿದೆ. ವೀಕೆಂಡ್ ಪಾರ್ಟಿ ಮಾಡೋರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ ಮಾಲ್, ಥಿಯೇಟರ್, ಬಾರ್, ಕ್ಲಬ್, ರೆಸ್ಟೋರೆಂಟ್ ಎಲ್ಲವೂ ಬಂದ್ ಮಾಡಲು ನಿರ್ದೇಶಿಸಿದೆ. ಆನ್ ಲೈನ್ ಫುಡ್ ಸರ್ವಿಸ್ ಹಾಗೂ ಪಾರ್ಸೆಲ್ ಗೆ ಅವಕಾಶ ನೀಡಲಾಗಿದೆ.
ಕೊರೊನಾ 3ನೇ ಅಲೆ ತಡೆಯಲು ಸರ್ಕಾರ ಹಂತ ಹಂತವಾಗಿ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದೆ.