JDSಗೆ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ; ಜೆಡಿಎಸ್ ಉಳಿವು ಅವರಿಂದ ಮಾತ್ರ ಸಾಧ್ಯ: ಸಂಸದೆ ಸುಮಲತಾ
ಕೆಆರ್ಎಸ್ ಅಣೆಕಟ್ಟಿನಲ್ಲಿ ಬಿರುಕು ಮೂಡಿದ್ದು, ನೀರಿನ ಸೋರಿಕೆಯಾಗುತ್ತಿದೆ. ಕೆಆರ್ಎಸ್ ಸುರಕ್ಷತೆಗೆ ಕ್ರಮಗೊಳ್ಳಬೇಕು ಎಂಬ ವಿಚಾರದಲ್ಲಿ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್ಡಿಕೆ ನಡುವೆ ಜಟಾಪಟಿ ನಡೆಯುತ್ತಿದೆ. ಈ ವಿಚಾರದಲ್ಲಿ ಸುಮಲತಾರನ್ನು ಕೆಆರ್ಎಸ್ ಮುಂದೆ ಮಲಗಿಸಬೇಕು ಎಂದು ಹೆಚ್ಡಿಕೆ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸುಮಲತಾ, ಜೆಡಿಎಸ್ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ, ಅವರಿಂದ ಕುಮಾರಸ್ವಾಮಿ ಸಂಸ್ಕಾರ ಕಲಿಯಬೇಕು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಮಗನಾಗಿ ಮತ್ತು ಮಾಜಿ ಸಿಎಂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಸಣ್ಣತನವನ್ನು ಪ್ರದರ್ಶಿಸಿದ್ದಾರೆ. ಅವರ ಸಂಸ್ಕಾರವನ್ನು ಅವರ ಮಾತಿನಲ್ಲಿಯೇ ಪುಷ್ಟೀಕರಿಸುತ್ತದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸಲು ಸಂಸದ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣವಾಗಿದ್ದಾರೆ. ಅವರನ್ನು ನೋಡಿ ಹೆಚ್ಡಿಕೆ ಸಂಸ್ಕಾರ ಎಂದರೇನು ಎಂಬುದನ್ನು ಕಲಿಯಬೇಕು ಎಂದು ಅವರು ಹೇಳಿದ್ದಾರೆ.
ಕುಮಾರಸ್ವಾಮಿಯವರ ಇಂತಹ ವರ್ತನೆಯಿಂದ ನಿಖಿಲ್ ಮತ್ತು ದೇವೇಗೌಡರು ಚುನಾವಣೆಯಲ್ಲಿ ಸೋತರು. ದೇವೇಗೌಡ ಪ್ರಬುದ್ದ ರಾಜಕಾರಣ ಇರುವುದು ಸಂಸದ ಪ್ರಜ್ವಲ್ ರೇವಣ್ಣ ಅವರಲ್ಲಿ ಮಾತ್ರ. ಅವರನ್ನು ಸಂಸತ್ನಲ್ಲಿ ಗಮನಿಸಿದ್ದೇನೆ. ಅಲ್ಲಿ ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ಮತ್ತು ಗೌರವ ನೀಡುವುದನ್ನು ಗಮನಿಸಿದರೆ ಜೆಡಿಎಸ್ನಲ್ಲಿ ಒಂದು ಆಶಾಕಿರಣ ಇದೆ ಎನ್ನಿಸುತ್ತದೆ. ರಾಜ್ಯದಲ್ಲಿ ಜೆಡಿಎಸ್ ಉಳಿಯುವುದಿದ್ದರೆ ಅದು ಪ್ರಜ್ವಲ್ ಅವರಿಂದ ಮಾತ್ರ ಸಾಧ್ಯ ಎಂದು ಸುಮಲತಾ ಹೇಳಿದ್ದಾರೆ.
ಕುಮಾರಸ್ವಾಮಿ ವಯಸ್ಸಿನಲ್ಲಿ ಪ್ರಜ್ವಲ್ ರೇವಣ್ಣಗಿಂತ ದೊಡ್ಡವರಾಗಿದ್ದರೂ ಅವರನ್ನು ನೋಡಿ ಹೆಚ್ಡಿಕೆ ಕಲಿಯುವುದು ಬಹಳಷ್ಟಿದೆ. ಅವರಿಂದ ಹೆಚ್ಡಿಕೆ ಮಾತನಾಡುವುದನ್ನು ಕಲಿಯಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು ಚಿಕ್ಕವರಾದೇನು, ದೊಡ್ಡವರಾದೇನು? ಚಿಕ್ಕವರು ಹೇಳುವುದು ಸರಿ ಎನಿಸಿದರೆ ಅದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಸುಮಲತಾ ಹೇಳಿದ್ದಾರೆ.
ಇದನ್ನೂ ಓದಿ: ಲೈಂಗಿಕ ಅಲ್ಪಸಂಖ್ಯಾತರಿಗೆ ಗುಡ್ ನ್ಯೂಸ್; ಎಲ್ಲಾ ಹುದ್ದೆಗಳಲ್ಲಿಯೂ 1% ಮೀಸಲಾತಿ ಜಾರಿ!