ಸುಮಲತಾ ಬಗ್ಗೆ ಕುಮಾರಸ್ವಾಮಿ ಕೊಟ್ಟ ಹೇಳಿಕೆ ಖಂಡನೀಯ – ಚಲುವರಾಯ ಸ್ವಾಮಿ
ಕೆಆರ್ಎಸ್ ಆಣೆಕಟ್ಟಿನ ವಿಚಾರವಾಗಿ ಸುಮಲತಾ ಬಗ್ಗೆ ಕುಮಾರಸ್ವಾಮಿ ಕೊಟ್ಟ ಹೇಳಿಕೆ ಖಂಡನೀಯ ಎಂದು ಮಾಜಿ ಸಚಿವ ಎನ್ ಚಲುವರಾಯ ಸ್ವಾಮಿ ಹೇಳಿದ್ದಾರೆ.
ಹೌದು.. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸುಮಲತಾ ಅವರಿಗೆ ಹೇಳಿದ ಮಾತು ಸದ್ಯ ಮಂಡ್ಯದಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ. ಕುಮಾರಸ್ವಾಮಿ ಹೇಳಿದ ಮಾತಿನ ವಿರುದ್ಧ ಅಂಬಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಜೊತೆಗೆ ಮಾಜಿ ಸಚಿವ ಮಾಜಿ ಸಚಿವ ಚಲುವರಾಯ ಸ್ವಾಮಿ ಕೂಡ ಕುಮಾರಸ್ವಾಮಿ ಹೇಳಿಕೆಯನ್ನು ಸ್ವೀಕಾರ್ಹವಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಕೊಟ್ಟ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಮಹಿಳೆಯರ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು. ಕುಮಾರಸ್ವಾಮಿ ಅವರು ಕೆಆರ್ ಎಸ್ ಬಗ್ಗೆ ಮಾತನಾಡುವಾಗ ಹೇಳಲು ಬೇರೆ ಪದಗಳ ಬಳಕೆ ಮಾಡಬಹುದಿತ್ತು. ಆದರೆ ಇದು ಅವರ ಗೌರವಕ್ಕೆ ಧಕ್ಕೆ ಬರುವಂತಹ ಮಾತು ಎಂದಿದ್ದಾರೆ.
ಕೆಆರ್ಎಸ್ ಆಣೆಕಟ್ಟಿನ ಸುತ್ತಲು ಅಕ್ರಮಗಣಿಗಾರಿಕೆ ಹಿನ್ನೆಲೆಯಲ್ಲಿ ಕೆಆರ್ಎಸ್ ಆಣೆಕಟ್ಟು ಹಾಳಾಗುತ್ತಿದೆ ಎನ್ನುವ ಮಾತನ್ನ ಸಂಸದೆ ಸುಮಲತಾ ಮಂಡ್ಯ ಸಭೆಯಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ‘ಕೆಆರ್ಎಸ್ ಆಣೆಕಟ್ಟು ಸೋರಿದರೆ ಸುಮಲತಾ ಅವರನ್ನು ಮಲಗಿಸಿ’ ಎನ್ನುವ ಹೇಳಿಕೆ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಈ ಮಾತಿಗೆ ತಿರುಗೇಟು ಕೊಟ್ಟ ಸುಮಲತಾ, ‘ಅವರಂತೆ ನಾನು ಮಾತನಾಡುವುದಿಲ್ಲ. ಅವರ ಮಾತು ಅವರ ಸಂಸ್ಕಾರವನ್ನು ತೋರಿಸುತ್ತದೆ. ಟೀಕೆಗಳಿಗೆ ನಾನು ಹೆದರೋದಿಲ್ಲ’ ಎಂದಿದ್ದಾರೆ.