ಬಂಧನ ಭೀತಿ: ಸೋಮವಾರ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬರುವುದು ಖಚಿತ?
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯದ ಮುಂದೆ ಹಾಜರಾಗಿ, ಸುಮಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಸಂತ್ರಸ್ತೆ ಪರ ವಕೀಲ ಜಗದೀಶ್ ಅವರು ಜಾರಕಿಹೊಳಿ ವಿರುದ್ದ ದೂರನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಗೆ ಬಂಧನ ಭೀತಿ ಶುರುವಾಗಿದೆ.
ಹೀಗಾಗಿ, ಎಸ್ಐಟಿ ತನಿಖೆಗೆ ನಿನ್ನೆಯೇ ಹಾಜರಾಗಬೇಕಿದ್ದ ಜಾರಕಿಹೊಳಿ ಅನಾರೋಗ್ಯದ ನೆಪವೊಡ್ಡಿ ತನಿಖೆಗೆ ಒಳಗಾಗಲು ಹಿಂದೆ ಸರಿದಿದ್ದಾರೆ. ಅಲ್ಲದೆ, ಒಂದು ವಾರದಿಂದ ಅಜ್ಞಾತ ಸ್ಥಳದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ನಾಳೆ (ಸೋಮವಾರ) ವಿಚಾರಣೆಗೆ ಹಾಜರಾಗಬೇಕು ಎಂದು ಎಸ್ಐಟಿ ಪೊಲೀಸರು ರಮೇಶ್ ಜಾರಕಿಹೊಳಿಗೆ ನೊಟೀಸ್ ನೀಡಿದ್ದಾರೆ.
ಆದರೆ, ವಿಚಾರಣೆ – ಬಂಧನ ಭೀತಿಯನ್ನು ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ನಾಳೆಯೂ ವಿಚಾರಣೆಗೆ ಹಾಜರಾಗುವುದು ಅನುಮಾನವಾಗಿದೆ. ಎರಡು ದಿನಗಳಿಂದ ಜ್ವರದ ನೆಪವೊಡ್ಡಿ ವಿಚಾರಣೆ ತಪ್ಪಿಕೊಂಡಿರುವ ರಮೇಶ್, ನಾಳೆ ತಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವರದಿ ತೋರಿಸಿ, 15 ದಿನಗಳ ಕಾಲ ವಿಚಾರಣೆಯಿಂದ ನುಣುಚಿಕೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ಮತ್ತು ಸರ್ಕಾರ ರಮೇಶ್ ಜಾರಕಿಹೊಳಿ ಪರವಾಗಿ ನಿಂತಿದೆ. ಈಗಾಗಲೇ ಆರೋಗ್ಯ ಸಚಿವರೂ ಆಗಿರುವ ಡಾ. ಸುಧಾಕರ್ ಅವರೂ, ತಮ್ಮ ವಿರುದ್ಧ ಸಿಡಿಗಳನ್ನು ರಿಲೀಸ್ ಮಾಡದಂತೆ ಕೋರ್ಟ್ನಲ್ಲಿ ಸ್ಟೇ ತಂದಿದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಕೊಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ, ಈ ಪ್ರಕರಣವು ನಿರ್ಭಯಾ ಕಾನೂನಿನ ಅಡಿಯಲ್ಲಿಯೂ ಬರುವುದರಿಂದಾಗಿ, ರಮೇಶ್ ಜಾರಕಿಹೊಳಿ ನೀಡುವ ಕೋವಿಡ್ ಸರ್ಟಿಫಿಕೇಟ್ ಅನ್ನು ಎಸ್ಐಟಿ ಪರಿಗಣಿಸದೇ ಅವರನ್ನು ಬಂಧಿಸಬೇಕು. ವಿಚಾರಣೆಗೆ ಒಳಪಡಿಸಬೇಕು. ಒಂದು ವೇಳೆ ಜಾರಕಿಹೊಳಿ ಕೋವಿಡ್ ವರದಿ ನೀಡಿದರೆ, ಅದನ್ನು ಪರಿಗಣಿಸದೇ, ಎಸ್ಐಟಿ ಅಧಿಕಾರಿಗಳೇ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. ಅವರನ್ನು ಪ್ರತ್ಯೇಕ ಐಸೋಲೇಷನ್ನಲ್ಲಿ ಇಡಬೇಕು. ರಮೇಶ್ ನೀಡುವ ಕುಂಟು ನೆಪಗಳ ಕಾರಣಕ್ಕಾಗಿ ಅವರ ವಿಚಾರಣೆಯನ್ನು ಮತ್ತಷ್ಟು ಮುಂದೂಡಬಾರದು ಎಂಬ ಅಭಿಪಪ್ರಾಯಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಜಾರಕಿಹೊಳಿ ಪ್ರಕರಣ: ಅತ್ಯಾಚಾರ ಸಂತ್ರಸ್ತೆಯ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್ಐಟಿ!