ಚಿಕ್ಕಬಳ್ಳಾಪುರ ಸ್ಪೋಟ: ಕ್ರಷರ್ ಮಾಲೀಕ BJP ಮುಖಂಡನ ಬಂಧನ; ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು!
ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟ ದುರಂತದ ಭ್ರಮರವಾಸಿನಿ ಕ್ರಷರ್ನ ಮಾಲೀಕ ಬಿಜೆಪಿಯ ಮುಖಂಡ ನಾಗರಾಜು ರೆಡ್ಡಿ ಮತ್ತು ಮತ್ತೋರ್ವ ಮಾಲೀಕ ರಾಘವೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲೆಟಿನ್ ಸ್ಫೋಟಗೊಂಡ ನಂತರ ಬಿಜೆಪಿ ಮುಖಂಡ ತಲೆ ಮರೆಸಿಕೊಂಡು ಪರಾರಿಯಾಗಿದ್ದರು. ಅವರ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಕ್ರಷರ್ಗೆ ಸ್ಫೋಟಕಗಳನ್ನ ಪೂರೈಸುತ್ತಿದ್ದ ಗಣೇಶ್ ಎಂಬಾತನನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.
ಇಂತಹ ದುರ್ಘಟನೆ ನಡೆಯಲು ಪೊಲೀಸರ ವೈಫಲ್ಯವೂ ಕಾರಣ ಎಂದು ಹೇಳಲಾಗಿದ್ದು, ಗುಡಿಬಂಡೆ ಎಸ್ಐ ಗೋಪಾಲ್ ರೆಡ್ಡಿ, ಇನ್ಸ್ಪೆಕ್ಟರ್ ಮಂಜುನಾಥ್ರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಫೆಬ್ರವರಿ 22ರ ರಾತ್ರಿ ಚಿಕ್ಕಬಳ್ಳಾಪುರದ ಹಿರೇನಸವಲ್ಲಿ ಬಳಿಯ ಕ್ರಷರ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಪೋಟ : 6 ಜನರ ದೇಹ ಛಿದ್ರ ಛಿದ್ರ!