ಪೊಲೀಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗುತ್ತೇವೆ; ಹೋರಾಟ ಬಿಡಲ್ಲ: ಹೋರಾಟನಿರತ ರೈತರು!
ಗಣರಾಜ್ಯದ ದಿನ ನಡೆದ ಘಟನೆಯ ನಂತರ ರೈತರ ಮೇಲೆ ಪ್ರಭುತ್ವದ ದಮನ ಆರಂಭವಾಗಿದೆ. ಗಾಝಿಯಾಪುರ ಗಡಿ ಭಾಗದಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ಎತ್ತಂಗಡಿ ಮಾಡಿಸಲು ಅಲ್ಲಿನ ಡಿಎಂ (ಜಿಲ್ಲಾಧಿಕಾರಿ) ಆದೇಶ ಹೊರಡಿಸಿದ್ದು, ಪೊಲೀಸರು ರೈತರ ಮೇಲೆ ಲಾಠಿ ಜಾರ್ಜ್ ದಾಳಿ ನಡೆಸಿ, ಓಡಿಸಲು ಮುಂದಾಗಿದ್ದಾರೆ. ನಾವು ಪೊಲೀಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗುತ್ತೇವೆ. ಆದರೆ, ಪ್ರತಿಭಟನೆಯಿಂದ ಹಿಂದೆಸರಿಯುವುದಿಲ್ಲ ಎಂದು ರೈತರು ಘೋಷಿಸಿದ್ದಾರೆ.
ಈ ವೇಳೆ, ಸಾವಿರಾರು ಪೊಲೀಸರು ಗಾಝಿಯಾಪುರ ಗಡಿಯಲ್ಲಿ ಜಮಾಯಿಸಿದ್ದರು. ಪ್ರತಿಭಟನಾ ನಿರತರಿಗೆ ನೀರು, ವಿದ್ಯುತ್ ಸರಬರಾಜು ನಿಲ್ಲಿಸಲಾಗಿತ್ತು. ಶೌಚಾಲಯ ಸಿಗದಂತೆ ಮಾಡಲಾಗಿತ್ತು. ಎಂದಿನಂತೆ ‘ಗೋದಿ ಮೀಡಿಯಾಗಳು; ಇದನ್ನು ಸಂಭ್ರಮಿಸುತ್ತಿವೆ. ಬಿಜೆಪಿ-ಸಂಘಪರಿವಾರದ ಗೂಂಡಾಗಳು ರೈತರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಈ ವೇಳೆ, ರೈತರನ್ನು ಉದ್ದೇಶಿಸಿ ಭಾಷಣ ಮಾಡಿದ ರೈತ ಮುಖಂಡ ರಾಕೇಶ್ ಟಿಕಾಯತ್, ನಮ್ಮ ಮೇಲೆ ಗುಂಡು ಹಾರಿಸಿದರೂ ಸರಿಯೇ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ ಪೊಲೀಸರು ನಮ್ಮನ್ನು ತೆರವುಗೊಳಿಸಿದರೆ ನಮ್ಮ ಸಾವಿಗೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಹಳಷ್ಟು ರೈತರು ಕೆರಳಿದ್ದು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಅವರೆಲ್ಲರೂ ಸದ್ಯಕ್ಕೆ ಟಿಕಾಯತ್ ಮನೆ ಮುಂದೆ ಜಮಾಯಿಸಿ ಹೋರಾಟಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದಾರೆ. ಗೊಂದಲದಲ್ಲಿದ್ದ ರೈತರು ಮತ್ತೆ ಗಟ್ಟಿನಿಲುವು ತಳೆದು ಹೋರಾಟ ಮುಂದುವರೆಸಿದ್ದಾರೆ.
ಆ ಸಂದರ್ಭದಲ್ಲಿ, ರೈತ ಕುಟುಂಬವೊಂದನ್ನು ಪತ್ರಕರ್ತರೊಬ್ಬರು, “ಏನು ನಿಮ್ಮ ಮುಂದಿನ ಪ್ಲಾನ್? ಇನ್ನೇನು ಸ್ವಲ್ಪ ಸಮಯದಲ್ಲಿ ಪೋಲೀಸರು ಬಂದು ನಿಮ್ಮನ್ನೆಲ್ಲ ಖಾಲಿ ಮಾಡಿಸುತ್ತಾರಲ್ವಾ? ಎಂದು ಪ್ರಶ್ನಿಸಿದ್ದಾಗ. ಆ ಕುಟುಂಬ ಆಕ್ರೋಶಭರಿತ ಕಿಚ್ಚಿನಿಂದ ಹೇಳಿದ್ದು ಹೀಗಿದೆ:
“ಇದಕ್ಕಿಂತ ದೊಡ್ಡ ಹಿಟ್ಲರ್ ಈ ಲೋಕದಲ್ಲಿ ಆಡಳಿತ ನಡೆಸಿದ್ದಾನೆ, ಕೊನೆಗೆ ಅವನಿಗೆ ಆತ್ಮಹತ್ಯೆ ಮಾಡಕೊಳ್ಳಬೇಕಾದ ಪರಿಸ್ಥಿತಿ ಬಂದು ಈ ಲೋಕವನ್ನೇ ಬಿಟ್ಟು ಹೋಗಬೇಕಾಗಿ ಬಂದಿದೆ, ನಾವು ಇಲ್ಲಿ ಬಂದಿರುವುದು ಜೀವಿಸುವ ಅವಕಾಶಕ್ಕಾಗಿ, ಕೃಷಿ ಮಾಡುವ ಸ್ವಾತಂತ್ರ್ಯಕ್ಕಾಗಿ, ಇದೊಂದು ಪ್ರತಿಭಟನೆಯ ಸ್ಥಳವಾಗಿದೆ, ನಾವು ಯಾರಿಗೂ ಭಯಪಡುವುದಿಲ್ಲ, ಮೇಲೆ ಆಕಾಶ… ಕೆಳಗೆ ರೈತನ ಭೂಮಿ… ಇಲ್ಲಿ ನಿಂತು ಪೋಲೀಸರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಬೇಕಾಗಿ ಬಂದರೆ ಮುಂದಿನ ತಲೆಮಾರಿಗಾಗಿ ನಾವು ನಮ್ಮ ಪ್ರಾಣವನ್ನು ನೀಡುತ್ತೇವೆ. ಯಾರೇ ಬಂದರೂ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ರೈತರು ಹೇಳಿದ್ದಾರೆ.
ಅವರ ಜೊತೆಗೆ, ಬಹಳ ಮಂದಿ ರಾತ್ರಿಯೇ ಗಾಝಿಪುರ ತಲಪಿದರು. ರೈತ ಹೋರಾಟ ಇನ್ನಷ್ಟು ಪ್ರಬಲಗೊಳ್ಳುವ ಲಕ್ಷಣ ಕಂಡಿತು. ಸರಕಾರ ಬೆದರಿತು. ವಿದ್ಯುತ್ ಪೂರೈಕೆ ಮರಳಿತು. ರೈತರ ದಂಡು ನೋಡಿ ಭಯಗೊಂಡ ಪೊಲೀಸರು ವಾಪಸ್ಸಾಗಿದ್ದಾರೆ ಎಂದು ಕರ್ನಾಟಕದ ಪತ್ರಿಕಾ ಪ್ರತಿನಿಧಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ದೆಹಲಿ ಹಿಂಸಾಚಾರದ ಮತ್ತೊಬ್ಬ ರುವಾರಿ? ಡೀಟೇಲ್ಸ್