ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು: ಅಜಿತ್ ಪವಾರ್
ಕರ್ನಾಟಕದ ಭಾಗವಾಗಿರುವ ‘ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
‘ಮರಾಠಿ ಮಾತನಾಡುವವರು ಹೆಚ್ಚಾಗಿರುವ ಈ ಪ್ರದೇಶಗಳನ್ನು ಸೇರಿಸಿ ಅಖಂಡ ಮಹಾರಾಷ್ಟ್ರವನ್ನು ಸ್ಥಾಪಿಸುವುದು ಬಾಳಾ ಠಾಕ್ರೆ ಕನಸಾಗಿತ್ತು. ಅದನ್ನು ನನಸು ಮಾಡಬೇಕಿದೆ. ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು’ ಎಂದಿದ್ದಾರೆ.
ಎನ್ಸಿಪಿ ನಾಯಕ ಅಜಿತ್ ಪವಾರ್ ಅವರ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
‘ಮಹಾರಾಷ್ಟ್ರದವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಅದಕ್ಕೆ ಬೆಲೆ ಕೊಡಬೇಕಿಲ್ಲ’ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
‘ಕರ್ನಾಟಕದ ಯಾವುದೇ ಭಾಗವನ್ನೂ ಅವರಿಗೆ ಬಿಟ್ಟು ಕೊಡಲು ತಯಾರಿಲ್ಲ. ಮಹಾರಾಷ್ಟ್ರದವರ ಹೇಳಿಕೆಯಿಂದ ನಮ್ಮ- ನಮ್ಮಲ್ಲಿ ಜಗಳ ಆಗಬಾರದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಇದನ್ನೂ ಓದಿ: ಇಬ್ಬಾಗವಾದ ಬಳ್ಳಾರಿ: ವಿಜಯನಗರ ಹೊಸ ಜಿಲ್ಲೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ!