ಕೋಮುದ್ವೇಷ ಸುದ್ದಿ ಪ್ರಸಾರ: ಅನಾರ್ಬ್ ಗೋಸ್ವಾಮಿಗೆ ಶೋಕಾಸ್ ನೋಟಿಸ್!
ಪಾಲ್ಘಾರ್ ಲಿಂಚಿಂಗ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ – ಮುಸ್ಲಿಮರ ನಡುವೆ ಕೋಮು ದ್ವೇಷ ಬೆಳೆಸುವ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಶೋಕಾಸ್ ನೋಟಿಸ್ನ್ನು ಹೊರಡಿಸಿದ್ದಾರೆ.
ಅಪರಾಧ ಪ್ರಕ್ರಿಯೆ ಸಂಹಿತೆಯ ಕಲಂ 107 ಮತ್ತು 108ರ ಅಡಿಯಲ್ಲಿ ಅರ್ನಾಬ್ ವಿರುದ್ದ ‘ಚಾಪರ್ ಪ್ರೊಸೀಡಿಂಗ್’ಅನ್ನು ಏಕೆ ಆರಂಭಿಸಬಾರದು ಎಂದು ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಶೋಕಾಸ್ ನೋಟಿಸ್ನ್ನು ಹೊರಡಿಸಿದ್ದಾರೆ. ಚಾಪ್ಟರ್ ಪ್ರೊಸೀಡಿಂಗ್ನಡಿ ಪೊಲೀಸರು ಯಾವುದೇ ನಾಗರಿಕನಿಂದ ಮೂರು ವರ್ಷಗಳವರೆಗೆ ಸದ್ವರ್ತನೆಯ ಬಾಂಡ್ ಅನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.
ಅಕ್ಟೋಬರ್16 ರಂದು ವಿಚಾರಣೆಗೆ ಹಾಜರಾಗುವಂತೆ ವರ್ಲಿ ವಿಭಾಗದ ಎಸಿಪಿ ಸುಧೀರ್ ಜಾಂಬವಾಡೇಕರ್ ಅರ್ನಾಬ್ಗೆ ನೀಡಿದ ನೋಟಿಸಿನಲ್ಲಿ ಸೂಚಿಸಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಸಿಡಿದ ಬಾಲಿವುಡ್: ಸುದ್ದಿ ಚಾನೆಲ್ಗಳ ಮೇಲೆ ಕೋರ್ಟ್ನಲ್ಲಿ ಮೊಕದ್ದಮೆ ದಾಖಲು!
ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಸಾಧುಗಳ ಹತ್ಯೆ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಬಾಂದ್ರಾ ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಜಮಾವಣೆ ಘಟನೆಗಳ ಆಕ್ಷೇಪಾರ್ಹ ಸುದ್ದಿ ಪ್ರಸಾರವನ್ನು ಮಾಡಿದ್ದು ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಅರ್ನಾಬ್ ವಿರುದ್ಧ ಈಗಾಗಲೇ ಮುಂಬೈನ ಎನ್ಎಂ ಜೋಶಿ ಮಾರ್ಗ ಮತ್ತು ವೈಧೋನಿ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದು, ಕೋಮು ದ್ವೇಷ ಆರೋಪಗಳನ್ನು ಮಾಡಲಾಗಿದೆ.
ಇದು ಮಹಾರಾಷ್ಟ್ರ ಸರ್ಕಾರದ ದುರುದ್ದೇಶಪೂರಿತ ಸಂಚು ಎಂದು ಕರೆದಿರುವ ರಿಪಬ್ಲಿಕ್ ಟಿವಿ, “ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಈಗಾಗಲೆ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿದ್ದಾಗ್ಯೂ, ಈಗ ಶೋಕಾಸ್ ನೊಟೀಸ್ ನೀಡಿರುವುದು ಕಾನೂನು ಬಾಹಿರ” ಎಂದು ಕರೆದಿದೆ.
ಇದನ್ನೂ ಓದಿ: ಜಾಲತಾಣಿಗರಿಂದ ಅಜಿತ್ ಹನುಮಕ್ಕನವರ್ ಟ್ರೋಲ್; ಟ್ರೆಂಡಿಂಗ್ನಲ್ಲಿ “ಏಜೆಂಟ್ ಅಜಿತ್”