ಭಾರತ ಬಂದ್; ಮುಗಿಲು ಮುಟ್ಟಿದ ರೈತರ ಆಕ್ರೋಶ: ಅನ್ನದಾತರ ಬಂಧನ!
ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಭಾರತ ಬಂದ್ ಹಿನ್ನೆಲೆ ರೈತ ಸಂಘಟನೆಗಳು, ರೈತಪರ ಹೋರಾಟಗಾರರು, ವಿರೋಧ ಪಕ್ಷಗಳು ಬೀದಿಗಿಳಿದಿವೆ. ಬೆಂಗಳೂರಿನಲ್ಲಿಯೂ ಅನ್ನದಾತರ ಘೋಷಣೆ ಮುಗಿಲು ಮುಟ್ಟಿದ್ದು, ಪ್ರತಿಭಟನಾ ನಿರತ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ರೈತ ಸಂಘಟನೆಗಳಾದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್ಸಿಸಿ), ಅಖಿಲ ಭಾರತ ಕಿಸಾನ್ ಮಹಾಸಂಘ್(ಎಐಕೆಎಂ) ಮತ್ತು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಕರೆ ನೀಡಿದ್ದ ಪ್ರತಿಭಟನೆಗೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.
ಕರ್ನಾಟಕ ರಾಜ್ಯದಲ್ಲೂ ಹಲವು ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಲಾಗುತ್ತಿದ್ದು, ರೈತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ರೈತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಧಿಕ್ಕಾರ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಒಪ್ಪುವುದಿಲ್ಲ, ಕಾರ್ಪೊರೇಟ್ ಕಂಪನಿಗಳ ಪರ ನಿಂತಿರುವ ಕೇಂದ್ರ ರಾಜ್ಯ ಸರ್ಕಾರಗಳಿಗೆ ಧಿಕ್ಕಾರ ಎಂಬ ಘೋಷಣೆಗಳು ಮೊಳಗಿದ್ದು, ರೈತರ ಸಂಕಷ್ಟವನ್ನು ಕೇಳದ ಸರ್ಕಾರ ರೈತರನ್ನು ಬಂಧಿಸಿದೆ.
ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ, ರೈತರೇ ಈ ಮಸೂದೆಗಳನ್ನು ವಿರೋಧಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿರೋಧ ಪಕ್ಷಗಳು ಮಸೂದೆಗಳ ವಿರುದ್ಧ ಸುಳ್ಳು ವದಂತಿ ಹರಡುತ್ತಿವೆ ಎನ್ನುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ರೈತರಿಗೆ ಈ ಕಾಯ್ದೆಗಳ ಮಹತ್ವ ತಿಳಿಸಿ ಎಂದು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಬಂಡವಾಳಿಗರ ಮನೆ ನಾಯಿಯ ಹೆಸರಿನಲ್ಲೂ ಆಸ್ತಿ ಮಾಡಲು ನೆರವಾಗಿದೆ ಸರ್ಕಾರ: ನೂರ್ ಶ್ರೀಧರ್