Package : ಪರಿಹಾರ ಪ್ಯಾಕೇಜ್ಗಳಲ್ಲ, ಬರಿ ಪೊಳ್ಳು ಭರವಸೆಗಳಷ್ಟೇ – HDK, DKS ಟೀಕಾ ಪ್ರಹಾರ
ಕೊರೋನಾ ಸಂಕಷ್ಟದಿಂದ ಸಂತ್ರಸ್ತರಾದವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಘೋಷಣೆ ಮಾಡಿರುವ ಪರಿಹಾರದ ಪ್ಯಾಕೇಜ್ ಕೇವಲ ಪೊಳ್ಳು ಭರವಸೆಗಳಿಂದ ಕೂಡಿದೆ ಎಂದು ಮಾಜಿ ಸಿಂಎ ಎಚ್ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
ಈ ಪರಿಹಾರ ಪ್ಯಾಕೇಜ್ಗಳಲ್ಲಿ ಯಾವುದೇ ಹುರುಳಿಲ್ಲ. ಇವು ಬರೀ ಪೋಳ್ಳು ಭರವಸೆಗಳಷ್ಟೇ ಎಮದು ಇಬ್ಬರೂ ನಾಯಕರೂ ಪ್ರತ್ಯೇಕವಾಗಿ ಗುಡುಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವೇಚ್ಚಾಚಾರದಿಂದ ಪ್ಯಾಕೇಜ್ಗಳನ್ನು ಘೋಷಿಸಿವೆ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಪರಿಹಾರ ಕೊಡುವುದು ಅಂದರೆ ಸಾಲ ನೀಡುವುದಲ್ಲ. ಆರೂವರೆ ಲಕ್ಷ ಕೋಟಿ ಮೊತ್ತ ಪ್ಯಾಕೇಜ್ ಅಂತೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಎರಡೂವರೆ ಸಾವಿರ ಕೋಟಿ ಮಾತ್ರ. ಇಂಥ ಪ್ಯಾಕೇಜ್ ನಿಂದ ಆರ್ಥಿಕ ಚೇತರಿಕೆ ಕಾಣಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಜನರ ನೋವು ನಲಿವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಲಿಲ್ಲ. ಪರಿಹಾರದ ನೆಪದಲ್ಲಿ ಕೇಂದ್ರ ಸರಕಾರ ಜನರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೂರಿದ್ದಾರೆ.
ಅದೇ ಸಬ್ಸಿಡಿ, ಗ್ರಾಂಟ್ ಮೂಲಕ ಕೊಟ್ಟಿದ್ದರೆ ಒಪ್ಪುತ್ತಿದ್ದೆ. ಸಿಎಂ 1600 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಒಂದು ರೂಪಾಯಿ ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಪೀಣ್ಯದಲ್ಲಿ ನಾಲ್ಕೂವರೆ ಲಕ್ಷ ಉದ್ಯಮಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಅಲ್ಲಿ ಮೂರುವರೆ ಸಾವಿರ ಮಾತ್ರ ಕಿಟ್ ಹಂಚಿದ್ದೀರ. ಇಲ್ಲೇ ಗೊತ್ತಾಗುತ್ತದೆ ನಿಮ್ಮ ಜನಪರ ಕಾಳಜಿ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಬೆಳೆ ಬೆಳೆಯುವವರಿಗೆ 5-6 ಸಾವಿರ, ಹೂ ಬೆಳೆಗಾರರಿಗೆ 10 ಸಾವಿರ ಸಾಕಾಗುತ್ತದೆಯೇ. ಎರಡು ಮೂರು ಲಕ್ಷ ರೂ ಬೇಕು ಬೆಳೆ ಬೆಳೆಯೋಕೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 26 ಸಾವಿರ ಕೋಟಿ ನಾವು ಇಟ್ಟ ಪ್ಯಾಕೇಜ್ ಹಣವಿದೆ. ಅದನ್ನ ಬಳಸಿಕೊಂಡು ಆ ಜನರನ್ನ ಕಾಪಾಡಿ ಎಂದು ಶಿವಕುಮಾರ್ ಅವರು ಸಲಹೆ ನೀಡಿದ್ದಾರೆ.