MTB ನಾಗರಾಜ್ ನಾಗರಾವು ಇದ್ದಂತೆ : ಶರತ್ ಬಚ್ಚೇಗೌಡ ವಾಗ್ದಾಳಿ
ಎಂಟಿಬಿ ನಾಗರಾಜ್ ವಿರುದ್ದ ಶರತ್ ಬಚ್ಚೇಗೌಡ ವಾಗ್ದಾಳಿ ಮಾಡಿದ್ದಾರೆ.
ಹೊಸಕೋಟೆಯ ದೇವಲಾಪುರದಲ್ಲಿ ಪ್ರಚಾರ ವೇಳೆ ಮಾತನಾಡಿ, ಗೆದ್ದಲು ಗೂಡು ಕಟ್ಟಿದ್ರೆ ಹುತ್ತದೊಳಗೆ ದೌರ್ಜನ್ಯವಾಗಿ ಬಂದು ಸೇರೋದು ನಾಗರಹಾವು, ಹಾಗಾಗಿದೆ ನಮ್ಮ ಸ್ತಿತಿ. ಬಿಜೆಪಿ ಅಭ್ಯರ್ಥಿ MTB ನಾಗರಾಜ್ ನಾಗರಾವು ಇದ್ದಂತೆ. ರಾಜಕೀಯಕ್ಕೆ ಬಂದಾಗ ಚಿಕ್ಕದಾಗಿತ್ತು, ಭ್ರಷ್ಟಾಚಾರ, ಕಮೀಷನ್, ಲಂಚ ತಿಂದು ಈಗ ಚೆನ್ನಾಗಿ ಬಲಿತುಕೊಂಡಿದೆ. ಅವರು ಯಾವ ಪಕ್ಷವನ್ನು ಕಟ್ಟಿಲ್ಲ, ಯಾವ ಕಾರ್ಯಕರ್ತರನ್ನು ಬೆಳೆಸಿಲ್ಲ. ಕಾಂಗ್ರೆಸ್ ಎಂಬ ಹುತ್ತ ಸೇರ್ಕೊಂಡು ಅಲ್ಲಿದ್ದವರಿಗೆ ಜಾಗ ಇಲ್ಲದಂತೆ ಮಾಡಿದ್ರು. ಕಾಂಗ್ರೆಸ್ ಹುತ್ತ ಸೇರ್ಕೋಂಡಾಗ ಚಿಕ್ಕದಾಗಿತ್ತು. ಅಲ್ಲಿನವರನ್ನೆಲ್ಲಾ ತಿಂದು ತೇಗಿ ಈಗ ಚೆನ್ನಾಗಿ ಬಲಿತುಕೊಂಡಿದೆ. ಈಗ ಆ ಹುತ್ತದಲ್ಲಿ ಜಾಗ ಸಾಕಾಗ್ತಿಲ್ಲ, ಅದಕ್ಕೆ ಬೇರೆ ಹುತ್ತ ನೋಡಿದ್ರು. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ದೊಡ್ಡ ಹುತ್ತ ಆಗಿದೆ, ಅದರಲ್ಲಿ ಸೇರ್ಕೊಂಡ್ರೆ ಇನ್ನೂ ಹತ್ತು ವರ್ಷ ತಾಪತ್ರೆ ಇಲ್ಲ ಅನ್ನೋ ಆಲೋಚನೆ. ಬಿಜೆಪಿ ಹುತ್ತ ಸೇರಿ ನಮಗೆಲ್ಲಾ ಜಾಗ ಇಲ್ಲದಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಶರತ್ ಬಚ್ಚೇಗೌಡ ಬೆಂಬಲಿಗರಿಂದ ಹಲ್ಲೆ ವಿಚಾರಕ್ಕೆ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದರು. ನೆನ್ನೆಯಷ್ಟೇ ಹಲ್ಲೆ, ದೌರ್ಜನ್ಯ ಮಾಡ್ತಿವಿ ಅಂತ ಆರೋಪ ಮಾಡಿದ್ರು. ಆರೋಪ ಬೆನ್ನಲ್ಲೇ ಈ ಘಟನೆ ನಡೆದಿದೆ, ಇದರ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ಹಲ್ಲೆ ಯಾರೇ ನಡೆಸಿದ್ರೂ ಕಾನೂನು ಕ್ರಮ ಜರುಗಿಸಲಿ, ಕಾನೂನು ಚೌಕಟ್ಟಿನಲ್ಲಿ ನಾವಿದ್ದೇವೆ. ಗ್ರಾಮದಲ್ಲಾದ ಘಟನೆಯನ್ನು ತಿರುಚಿ ರಾಜಕೀಯ ಬಣ್ಣ ಕಟ್ಟಲು ಹೊರಟಿದ್ದಾರೆ. ಕಳೆದ ಎರಡು ತಿಂಗಳಿಂದ ನಮ್ಮ ಬಗ್ಗೆ ಅಪಪ್ರಚಾರ ಮಾಡೋದೇ MTB ಕೆಲಸ ಆಗೋಗಿದೆ. ಈ ಹಲ್ಲೆ ಆರೋಪ ಮತ್ತೊಂದು ಹೊಸ ಅಪಪ್ರಚಾರ. MTB ನಾಗರಾಜ್ ಅವರು ಯಾವುದೇ ಅಭಿವೃದ್ಧಿ ಕೆಲಸದ ಬಗ್ಗೆ ಮಾತ್ನಾಡ್ತಿಲ್ಲ, ನನ್ನ ಬಗ್ಗೆ ನೇರ ವಾಗ್ದಾಳಿ ಮಾಡ್ತಿದಾರೆ.
ನಾವು ಸೌಮ್ಯ ಸ್ವಭಾವದವರು, ಗಲಭೆಗಳಿಗೆ ಪ್ರತ್ಸಾಹ ಕೊಡೋದಿಲ್ಲ, ಈ ಆರೋಪಗಳಿಗೆಲ್ಲಾ ಹೆದರೋದಿಲ್ಲ ಎಂದರು.