ರಾಷ್ಟ್ರ ಭಕ್ತಿ, ಪ್ರೇಮ ಮೋದಿಯವರಲ್ಲಿ ತುಂಬಿದೆ, ನೆರೆಗೆ ಸ್ಪಂದಿಸ್ತಾರೆ – ಪೇಜಾವರ ಶ್ರೀ ವಿಶ್ವಾಸ
ರಾಜ್ಯದ ನೆರೆಗೆ ಸ್ಪಂದಿಸಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಕರ್ನಾಟಕ ಜನ್ರ ಸಂಕಷ್ಟ ಗಮನಿಸಿ. ಕೇಂದ್ರ ಸರ್ಕಾರದಿಂದ ವಿಶೇಷ ಸಹಾಯ ಮಾಡ್ಬೇಕೆಂದು ಕೇಳಿದ್ದೇನೆ ಎಂದು ಬಾಗಲಕೋಟೆಯ ಮುತ್ತೂರ ಗ್ರಾಮದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣಾ ಸಮಾರಂಭದಲ್ಲಿ ಪೇಜಾವರ ಶ್ರೀ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಬಹಳ ಒಳ್ಳೆಯ ರೀತಿ ನಡೆಸ್ತಿದ್ದಾರೆ. ರಾಷ್ಟ್ರ ಭಕ್ತಿ,ಪ್ರೇಮ ಅವರಲ್ಲಿ ತುಂಬಿದೆ. ನೆರೆ ಸಂಕಷ್ಟಕ್ಕೆ ಸ್ಪಂದಿಸ್ತಾರೆ. ಇನ್ನು ಯಾಕೆ ಕೇಂದ್ರದಿಂದ ಸಹಾಯ ಬಂದಿಲ್ಲ ಅನ್ನೋ ಸಂಕೋಚ ನಮ್ಮದಾಗಿದೆ. ನಾನು ವಿಶೇಷ ಗಮನಕೊಡ್ಬೇಕಂತ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಎಲ್ಲವನ್ನೂ ಸರ್ಕಾರ ಮಾಡ್ಬೇಕಂತ ಸುಮ್ಮನೆ ಕುಳಿತುಕೊಳ್ಳೋದಲ್ಲ. ಸರ್ಕಾರ ತಂದೆ ಇದ್ದ ಹಾಗೆ,ಸಮಾಜ ತಾಯಿಯಿದ್ದ ಹಾಗೆ. ಸರ್ಕಾರ ಆದೇಶ ಮಾಡಿ ಅನುದಾನ ಕೊಡಬಹುದು. ಆದ್ರೆ ಸಮಾಜ ತಾಯಿ ಹೇಗೆ ಮಕ್ಕಳ ಸೇವೆ ಮಾಡುವಂತೆ,ಸಮಾಜ ಸೇವೆ ಮಾಡ್ಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರವೂ ಮಾಡ್ಬೇಕು,ಸಮಾಜವೂ ಮಾಡ್ಬೇಕು.
ಸುಧಾಮೂರ್ತಿ ನೆರೆಗೆ ವಿಶೇಷ ಅನುದಾನ ನೀಡಿದ್ದಾರೆ. ನೆರೆಪೀಡಿತ ಮುತ್ತೂರು ಗ್ರಾಮದ ಅಭಿವೃದ್ಧಿಗೆ ಶ್ರೀಮಠದಿಂದ ೫ಲಕ್ಷ ಕೊಡ್ತೇವೆ. ಕಲಬುರ್ಗಿ ಭಾಗದಲ್ಲಿ ಸೂರು ಕಟ್ಟಿಸಿಕೊಟ್ಟಿದ್ದೇವೆ. ನೆರೆ ,ಬರ ಸಂದರ್ಭದಲ್ಲೂ ಮಠದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯ ಮಾಡಿದ್ದೇವೆ ಎಂದು ಕೇಂದ್ರ ನೆರೆ ಪರಿಹಾರ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.