ಹಾನಗಲ್ ಉಪಚುನಾವಣೆ: ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ!
ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ನಡುವೆ ಹಾನಗಲ್ ಕ್ಷೇತ್ರದ ತಿಳವಳ್ಳಿ ಗ್ರಾಮದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರಿದ್ದಾರೆ.
ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮಸ್ಕಿಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಈಗಾಗಲೇ ಫಸ್ಟ್ ಡೋಸ್ ಲಸಿಕೆ ಆಗಿದೆ. ಈಗ ಹಾನಗಲ್ನಲ್ಲಿ ಸೆಕೆಂಡ್ ಡೋಸ್ ಲಸಿಕೆ ಯಶಸ್ವಿಯಾಗಲಿದೆ. ಎರಡು ಡೋಸ್ಗಳನ್ನು ಪಡೆದರೆ ಕೊರೊನಾ ಬರುವುದಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ ಈ ಉಪಚುನಾವಣೆಯನ್ನೂ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಹಾನಗಲ್ನಲ್ಲಿ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ. ಇಲ್ಲಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಈ ಹಿಂದೆ ಇದ್ದ ಶಾಸಕರು ಜನರ ಕೈಗೆ ಸಿಗುತ್ತಿರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರು ಸೋತಿದ್ದರೂ ಕ್ಷೇತ್ರದಲ್ಲೇ ಜನರ ಜೊತೆಗಿದ್ದರು. ಜನರೊಂದಿಗಿನ ಅವರ ಒಡನಾಟವು ಜನರಲ್ಲಿ ಮಾನೆ ಅವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹುಟ್ಟುಹಾಕಿದೆ. ಅವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ಜನಪ್ರತಿನಿಧಿಗಳಾದವರಿಗೆ ಸೇವಾ ಮನೋಭಾವ ಇರಬೇಕು. ಅಂತಹ ಮನೋಭಾವ ಮಾನೆ ಅವರಿಗಿದೆ. ಈ ಕ್ಷೇತ್ರ ಸಿಎಂ ಬೊಮ್ಮಾಯಿ ಅವರ ತವರು ಕ್ಷೇತ್ರವಾದರು, ಓಟು ಹಾಕುವವರು ಹಾನಗಲ್ ಕ್ಷೇತ್ರದ ಮತದಾರರು. ಅವರು ಮಾನೆಯವರನ್ನು ಕೈಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಬೆಳಗಾವಿ ಚುನಾವಣೆಯಲ್ಲಿ ದಾಖಲೆ ಮತ ಪಡೆದುಕೊಂಡಿದ್ದೇವೆ. ಮಸ್ಕಿಯಲ್ಲಿ ಗೆದ್ದಿದ್ದೇವೆ. ಅದೇ ರೀತಿ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾನೇ ಪೂರ್ಣಾವಧಿ ಮುಖ್ಯಸ್ಥೆ: ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಖಡಕ್ ಉತ್ತರ!