ಕೊರೊನಾ: 25.50 ಕೋಟಿ ಉದ್ಯೋಗ ನಷ್ಟ; ಬಡತನಕ್ಕೆ ತುತ್ತಾಗಿದ್ದು 12.40 ಕೋಟಿ ಜನರು: ವಿಶ್ವಸಂಸ್ಥೆ ವರದಿ
ಜಗತ್ತಿನಲ್ಲಿ ಕೊರೊನಾ ಆವರಿಸಿಕೊಂಡ ನಂತರ 2020ರಲ್ಲಿ ಸುಮಾರು 12.40 ಕೋಟಿ ಜನರು ಬಡತನಕ್ಕೆ ತುತ್ತಾಗಿದ್ದಾರೆ. ಅಲ್ಲದೆ, ಸುಮಾರು 25.50 ಕೋಟಿ ಜನರು ತಮ್ಮ ಪೂರ್ಣಾವಧಿಯ ಉದ್ಯೋಗಗಳನ್ನು ಕಳೆದುಕೊಂಡು ನಿರುದ್ಯೋಗಕ್ಕೆ ಕೂಪಕ್ಕೆ ಒಳಗಾಗಿದ್ದಾರೆ. ಅಂತೆಯೇ ಹಸಿವಿನಿಂದ ಬಳಲುವವರ ಸಂಖ್ಯೆಯು 8.30 ಕೋಟಿಯಿಂದ 13.20 ಕೋಟಿಗೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಕೊರೊನಾ ಪರಿಸ್ಥಿತಿ ನಿರ್ಮಾಣವಾಗುವ ಮುನ್ನವೇ ಹಲವಾರು ದೇಶಗಳ ಅಭಿವೃದ್ದಿ ಪಥದಿಂದ ಹಿಂದೆ ಸರಿಯುತ್ತಿದ್ದವು. ಅವುಗಳ ಸಾಧನೆ ಕುಂಠಿತಗೊಂಡಿತ್ತು. ಆದರೆ, ಸೋಂಕಿನ ಹಾವಳಿ ಹೆಚ್ಚಾದ ನಂತರ ಆ ದೇಶಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಕೊರೊನಾದಿಂದಾಗಿ ಆಫ್ರಿಕ ಪ್ರಾಂತದ 1 ಕೋಟಿಗೂ ಅಧಿಕ ಬಾಲಕಿಯರು ಬಾಲ್ಯ ವಿವಾಹವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
2019ಕ್ಕೆ ಹೋಲಿಸಿದರೆ 2020ರಲ್ಲಿ ವಿದೇಶಿ ನೇರ ಹೂಡಿಕೆಯು ಶೇ.40ಕ್ಕೆ ಕುಸಿದಿದೆ. ಇದರಿಂದಾಗಿ ಅಭಿವೃದ್ದಿಶೀಲ ರಾಷ್ಟ್ರಗಳ ಆರ್ಥಿಕತೆ ಅಧೋಗತಿಯತ್ತ ದಾಪುಗಾಲಿಡುತ್ತಿದೆ ಎಂದೂ ಅದು ಹೇಳಿದೆ.
ಇದನ್ನೂ ಓದಿ: ಪ್ರತಿಭಟನೆ ಮತ್ತು ಚುನಾವಣೆಗಳ ಭಯದಿಂದ ಸಿಎಎ ಜಾರಿಗೆ ಹಿಂದೆ ಸರಿಯುತ್ತಿದೆಯೇ ಬಿಜೆಪಿ?
ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಪತನವು ಅಭಿವೃದ್ಧಿ ಹೊಂದುತ್ತಿರುವ ಪುಟ್ಟ ದ್ವೀಪ ರಾಷ್ಟ್ರಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಬೀರಿದೆಯೆಂದು ವರದಿ ಹೇಳಿದೆ.
ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಮರಳಿ ಹಳಿಗೆ ತರಬೇಕಾದರ ಸರಕಾರಗಳು, ನಗರಾಡಳಿತಗಳು, ಔದ್ಯಮಿಕ ಹಾಗೂ ಕೈಗಾರಿಕೆಗಳು, ಕಡಿಮೆ ಇಂಗಾಲದ ಹೊರಸೂಸುವಿಕೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ, ಉತ್ತಮ ಉದ್ಯೋಗಗಳ ಸೃಷ್ಟಿ, ಲಿಂಗ ಸಮಾನತೆಗೆ ಉತ್ತೇಜನ ಹಾಗೂ ಅಸಮಾನತೆಯ ಹೆಚ್ಚಳವನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ವರದಿ ಹೇಳಿದೆ.
ನಾವೀಗ ಮಾನವ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಈಗ ನಾವು ಕೈಗೊಳ್ಳುವ ನಿರ್ಧಾರಗಳು ಹಾಗೂ ಕ್ರಮಗಳು ಮುಂದಿನ ತಲೆಮಾರುಗಳ ಮೇಲೆ ಮಹತ್ವದ ಪರಿಣಾಮನ್ನು ಬೀರಲಿವೆ. ಕೊರೋನ ಸಾಂಕ್ರಾಮಿಕದ ಪಿಡುಗಿನಿಂದ ನಾವು ಕಲಿತ ಪಾಠವು ನಮಗೆ ವರ್ತಮಾನದ ಹಾಗೂ ಭವಿಷ್ಯದ ಸವಾಲುಗಳಿಂದ ಮೇಲೇಳು ನೆರವಾಗಲಿದೆ ಎಂದೂ ವಿಶ್ವಸಂಸ್ಥೆ ಹೇಳಿದೆ.
ಇದನ್ನೂ ಓದಿ: ಸುಸ್ಥಿರ ಅಭಿವೃದ್ದಿ ಪಟ್ಟಿಯಲ್ಲಿ ಭಾರತಕ್ಕೆ ಭಾರೀ ಕುಸಿತ; ನೇಪಾಳ, ಶ್ರೀಲಂಕಕ್ಕಿಂತ ಹಿಂದೆ ಸರಿದ ಭಾರತ!