OBCಗಳಿಗೆ ರಾಜಕೀಯ ಮೀಸಲಾತಿ ತರುವಲ್ಲಿ ಬಿಜೆಪಿ ವಿಫಲವಾದರೆ ರಾಜಕೀಯದಿಂದ ನಿವೃತ್ತಿ: ದೇವೇಂದ್ರ ಫಡ್ನವಿಸ್
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ತಮ್ಮ ಪಕ್ಷವು ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವಿಸ್ ಶನಿವಾರ ಹೇಳಿದ್ದಾರೆ. ಒಂದು ವೇಳೆ ತಾವು ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ನೀಡದಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿಯೂ ಅವರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಕೋಟಾ ಮರುಸ್ಥಾಪನೆಗಾಗಿ ಬಿಜೆಪಿ ‘ಚಕ್ಕಾ ಜಾಮ್’ (ಸಂಚಾರವನ್ನು ನಿರ್ಬಂಧ) ಆಂದೋಲನ ನಡೆಸಿದೆ. ಮುಂಬೈನ ವೆರೈಟಿ ಸ್ಕ್ವೇರ್ ಚೌಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತುತ್ತೇವೆ ಎಂದು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಈ ಸಮಸ್ಯೆಯನ್ನು ರಾಜ್ಯ ಮಟ್ಟದಲ್ಲಿಯೇ ಪರಿಹರಿಸಬಹುದು ಎಂಬುದು ಸತ್ಯ. ಕಾನೂನು ರೂಪಿಸುವ ಮೂಲಕ ರಾಜ್ಯ ಸರ್ಕಾರವು ಮೀಸಲಾತಿಯನ್ನು ಪುನಃಸ್ಥಾಪಿಸಬಹುದು. ಕೇಂದ್ರ ಸರ್ಕಾರದ ಯಾವುದೇ ಕಾಯ್ದೆಯ ಅಗತ್ಯವಿಲ್ಲ. ಆ ಕಾರಣದಿಂದಾಗಿಯೇ ಇವರ ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಜಾರಿಯಲ್ಲಿದೆ. ಮಹಾರಾಷ್ಟ್ರದಲ್ಲಿ ನೀವು (ಎಂವಿಎ) ಕಾನೂನು ರೂಪಿಸಬೇಕು. ಆದರೆ, ಅವರು ಸಂಸತ್ತಿನಲ್ಲಿ ಪ್ರಶ್ನೆ ಎತ್ತುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳನ್ನು ಬಹಿರಂಗಪಡಿಸುವವರೆಗೂ ನಾವು ನಿಲ್ಲುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಒದಿ: ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ?: ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆಸುವ ಬಗ್ಗೆ ಹೇಳಿದ ನಂತರ ರಾಜಕೀಯ ಸಂಚಲನ!
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳ ಒಟ್ಟು ಮೀಸಲಾತಿ ಪ್ರಮಾಣ ಒಟ್ಟು ಸ್ಥಾನಗಳಲ್ಲಿ ಶೇಕಡಾ 50 ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಮಾರ್ಚ್ 4ರ ನೀಡಿದ ಆದೇಶದಲ್ಲಿ ತಿಳಿಸಿದೆ.
“ಎಂವಿಎ ಸರ್ಕಾರದಲ್ಲಿರುವ ಎಲ್ಲ ಒಬಿಸಿ ಮಂತ್ರಿಗಳಿಗೆ ನಾನು ಮನವಿ ಮಾಡಲು ಬಯಸುತ್ತೇನೆ. ನಮ್ಮ ಮತ್ತು ಅವರ ನಡುವೆ ಯಾವುದೇ ದ್ವೇಷವಿಲ್ಲ. ಒಬಿಸಿಗಳ ವಿಚಾರದಲ್ಲಿ ನೀವು ಪ್ರಾಮಾಣಿಕರಾಗಿದ್ದರೆ ಪಕ್ಷವನ್ನು ಲೆಕ್ಕಿಸದೆ ನಾವು ನಿಮ್ಮೊಂದಿಗೆ ನಿಲ್ಲಲು ಸಿದ್ಧರಿದ್ದೇವೆ. ನೀವು ಸಿದ್ದರಿದ್ದರೆ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ನಾವು ಒಬಿಸಿ ಮೀಸಲಾತಿಯನ್ನು ಮರಳಿ ತರಬಹುದು“ ಎಂದು ಅವರು ಹೇಳಿದ್ದಾರೆ.
ಇಲ್ಲದಿದ್ದರೆ ನಮಗೆ ಅಧಿಕಾರ ನೀಡಿ. ನಾವು ಒಬಿಸಿಗಳಿಗೆ ರಾಜಕೀಯ ಮೀಸಲಾತಿಯನ್ನು ಮರಳಿ ತರುತ್ತೇವೆ. ಒಂದು ವೇಳೆ ವಿಫಲವಾದರೆ, ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.
ಇದನ್ನೂ ಒದಿ: ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?