‘ನಿಮ್ಮ ಯಾವ ಗುಣ ನಿಮ್ಮ ಮಗನಲ್ಲಿದೆ?’ ಸರಣಿ ಟ್ವೀಟ್ ಮೂಲಕ ಸಿದ್ದುಗೆ ಬಿಜೆಪಿ ತಿರುಗೇಟು..!
ವಂಶವಾಹಿನಿ ರೂಪದಲ್ಲಿ ಕಾಯಿಲೆಗಳು ಮಾತ್ರ ತಂದೆಯಿಂದ ಮಗನಿಗೆ ಬರುತ್ತವೆ. ಆದರೆ ಗುಣಗಳು ಬರುತ್ತವೆ ಅನ್ನೋದು ನಿಮ್ಮಿಂದಲೇ ಗೊತ್ತಾಗಿದ್ದು. ನಿಮ್ಮ ಪುತ್ರನಿಗೆ ನಿಮ್ಮ ಯಾವ ಗುಣಗಳು ಬಂದಿವೆಯೇ..? ಎಂದು ಸರಣಿ ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ಕೊಟ್ಟಿದೆ.
ಹೌದು… ನಿನ್ನೆ ಮೈಸೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ, ” ರಾಷ್ಟ್ರಪಿತ ಮಹಾತ್ಮ ಗಾಂಧಿ ಮಗ ಕುಡುಕನಾಗಿದ್ದ, ಹಾಗಾಗಿ ತಂದೆಯ ಗುಣಗಳು ಮಗನಿಗೆ ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬೊಮ್ಮಯಿ ಕೂಡ ಅವರ ತಂದೆ ಎಸ್ ಆರ್ ಬೊಮ್ಮಾಯಿ ಅವರ ಗುಣವೇ ಬರುತ್ತೆ ಎಂದು ಹೇಳಲು ಆಗುವುದಿಲ್ಲ” ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಟಕ್ಕರ್ ಕೊಟ್ಟ ಬಿಜೆಪಿ, “ನಿಮ್ಮ ಹಿರಿಯ ಪುತ್ರ ರಾಕೇಶ್ ಸಿಕ್ಕಾಪಟ್ಟೆ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿತ್ತು. ಪ್ರಾಮಾಣಿಕವಾಗಿ ಹೇಳಿ ನಿಮ್ಮ ಪುತ್ರ ಶಾಸಕ ಯತೀಂದ್ರ ಅವರಿಗೆ ನಿಮ್ಮ ಗುಣಗಳು ಎಷ್ಟು ಬಂದಿವೆ?” ಎಂದು ಸರಣಿ ಟ್ವೀಟ್ ಮೂಲಕ ಸಿದ್ದುಗೆ ಬಿಜೆಪಿ ತಿರುಗೇಟು ಕೊಟ್ಟಿದೆ.
“ನೀವು ಯಾವ ಗಾಂಧಿ ಬಗ್ಗೆ ಹೇಳಿದ್ದು? ಸೋನಿಯಾ ಗಾಂಧಿ ಮಗನ ಬಗ್ಗೆನೋ? ಅಥವಾ ಇಂದಿರಾ ಗಾಂಧಿಯ ಪುತ್ರನ ಬಗ್ಗೆಯೋ? ಸಂಸ್ಕಾರ, ಗುಣ, ಸಾಮಾರ್ಥ್ಯ ಅವರವರ ಗಳಿಕೆಯಾಗಿರುತ್ತವೆ” ಎಂದು ಬೊಮ್ಮಾಯಿ ಅವರನ್ನು ಲಘುವಾಗಿ ಕಾಲೆಳೆದ ಸಿದ್ದರಾಮಯ್ಯಗೆ ಟ್ವೀಟ್ ಮೂಲಕ ಬಿಜೆಪಿ ತರಾಟೆ ತೆಗೆದುಕೊಂಡಿದೆ.