ರಾಜ್ಯದಲ್ಲಿ ವರುಣಾರ್ಭಟ : ಅಪಾಯದ ಮಟ್ಟ ಮೀರಿದ ವೇದಗಂಗಾ ನದಿ!
ರಾಜ್ಯಾದ್ಯಂತ ವರುಣಾರ್ಭಟ ಹೆಚ್ಚಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು, ರಸ್ತೆಗಳು, ಜಮೀನುಗಳು ಜಲಾವೃತಗೊಂಡು ಸೂರಿಲ್ಲದೇ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು.. ಪಶ್ಚಿಮಘಟದಲ್ಲಿ ವೇದಗಂಗಾನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ನದಿ ತೀರದಲ್ಲಿ ವಾಸುವ ಜನರಲ್ಲಿ ಆತಂಕ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಜಲಾವೃತ ಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಮೇಲೆ ನದಿ ನೀರು ಪ್ರವಾಹದಂತೆ ಹರಿಯುತ್ತಿದ್ದು ವಾಹನಗಳು ಮುಂದೆ ಚಲಿಸಲಾಗದೇ ನಿಂತುಕೊಂಡಿವೆ.
ಬೆಳಗಾವಿ ಸೇರಿ ಸುತ್ತಲು ಸತತ ಮಳೆಯಾಗುತ್ತಿತ್ತು ಕೃಷ್ಣ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಿರಂತರ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಕಾನಾಪುರ ಸೇತುವೆಗಳು ನೀರಿನಿಂದ ಮುಚ್ಚಿ ಹೋಗಿವೆ. ನಿಪ್ಪಾಣಿ ವೇದಗಂಗಾ ನದಿಯಲ್ಲಿ ಕಾರು ಇನ್ನಿತರ ವಾಹನಗಳು ರಸ್ತೆ ದಾಟಲಾಗದೇ ಸಿಲುಕೊಕೊಂಡಿವೆ.
ಹಿರಣ್ಯಕೇಶಿ ನದಿ ಮೈತುಂಬಿ ಹರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ 4 ಜಲಾವೃತವಾಗಿದೆ. ಸಂಕೇಶ್ವರ ಪಟ್ಟಣದಲ್ಲಿ ನದಿ ನೀರು ಸುತ್ತುವರೆದಿದ್ದು ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಕುಂಬಾರದ ಗಲ್ಲಿ ಲಕ್ಷ್ಮ ದೇವಲಾಯವೂ ಜಲಾವೃತವಾಗಿದೆ.
ಇನ್ನೂ ಭಾರೀ ಮಳೆಗೆ ರಾಯಚೂರು ಶೀಲಹಳ್ಳಿ ಸೇತುವೆ ಮುಳುಗುವ ಸಾಧ್ಯತೆ ಇದೆ. ಕೃಷ್ಣ ನದಿ ತೀರದಲ್ಲಿ ಆತಂಕ ಹೆಚ್ಚಾಗಿದೆ. ನದಿ ಪಾತ್ರದ ಹಳ್ಳಿಗಳಲ್ಲಿ ಡಂಗೂರ ಸಾರಿ ಸೂಚನೆ ನೀಡಲಾಗುತ್ತಿದೆ.
ಇನ್ನೂ ಬಾಗಲಕೋಟೆ, ಧಾರವಾಡ, ಕೊಡಗು, ಹಾವೇರಿಯಲ್ಲಿ , ಕಲಬುರಗಿ, ಚಿತ್ರದುರ್ಗ,ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಕೆಲ ಹಳ್ಳಿಗೆ ರಸ್ತೆ ಸಂಚಾರ ಕಡಿತಗೊಂಡಿದೆ. ಮನೆಗಳು, ಗದ್ದೆಗಳು ಜಲಾವೃತವಾಗಿದ್ದು ಕರುನಾಡಿಗೆ ಮತ್ತೆ ಪ್ರವಾಹ ಕಂಠಕದ ಭೀತಿಯನ್ನು ಹೆಚ್ಚಿಸಿದೆ.