ತುಮಕೂರು-ಬೆಂಗಳೂರು ರಸ್ತೆಯಲ್ಲಿ ಸರಣಿ ಅಪಘಾತ: ಹಲವು ವಾಹನಗಳು ಖಜಂ
ನೆಲಮಂಗಲ ಬಳಿಯಿರುವ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ಧಾರಿಯಲ್ಲಿ ಅಪಘಾತ ಸಂಭವಿಸಿ ಸುಮಾರು ಒಂಬತ್ತು ವಾಹನಗಳು ಜಕ್ಕಂಗೊಂಡಿರುವ ಘಟನೆ ನಡೆದಿದೆ. ಒಬ್ಬ ವ್ಯಕ್ತಿಗೆ ಗಾಯಗಳಾಗಿದೆ.
ನೆಲಮಂಗಲದ ಟಿ ಬೇಗೂರು ಕ್ರಾಸ್ ಬಳಿಯಲ್ಲಿ ದಟ್ಟ ಮಂಜು ತುಂಬಿದ್ದರಿಂದಾಗಿ ಎದುರಿನ ವಾಹನ ಸ್ಪಷ್ಟವಾಗಿ ಕಾಣಿಸದ ಕಾರಣ, ತುಮಕೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ದಿಢೀರನೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ, ಹಿಂದೆಯೇ ವೇಗವಾಗಿ ಬರುತ್ತಿದ್ದ ಲಾರಿ ಬಸ್ಗೆ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಇದ್ದ ಖಾಸಗಿ ಬಸ್, ಕಾರು, ತರಕಾರಿ ಲಾರಿ ಸೇರಿದಂತೆ ಒಂಬತ್ತು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ.
ಅಪಘಾತದ ರಬಸಕ್ಕೆ ಲಾರಿ ಹಾಗೂ ಇತರ ವಾಹನಗಳು ರಸ್ತೆ ವಿಭಜಕದ ಮೇಲೇರಿ ನಿಂತಿವೆ. ಸರಣಿ ಅಪಘಾತದಿಂದಾಗಿ ಉಳಿದ ವಾಹನಗಳೂ ಮುಂದೆ ಹೋಗಲಾಗದೇ ಸಂಚಾರ ದಟ್ಟಣೆ ಉಂಟಾಗಿತ್ತು. ಅಪಘಾತ ಸಂಭವಿಸಿದಾಗಿನಿಂದಲೂ ಸಂಚಾರ ದಟ್ಟಣೆಯನ್ನು ನಿಭಾಯಿಸಿದ ಪೊಲೀಸರು ಬೆಳಗ್ಗೆ 11 ಗಂಟೆಯ ವೇಳೆಗೆ ರಸ್ತೆಯಲ್ಲಿದ್ದ ವಾಹನಗಳನ್ನು ತೆರವುಗೊಳಿಸಿ, ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಅನಿವಾರ್ಯವಾಗಿ ಕೆಲ ಕಾಲ ಹೆದ್ಧಾರಿಯ ಬಲಭಾಗದ ರಸ್ತೆಯಲ್ಲೇ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ತರಕಾರಿ ಲಾರಿ ಅಪಘಾತದಿಂದ ರಸ್ತೆಯಲ್ಲೆಲ್ಲಾ ತರಕಾರಿ ಚೆಲ್ಲಾಪಿಲ್ಲಿಯಾಗಿತ್ತು. ಕ್ಯಾಂಟರ್ ಡಿಕ್ಕಿಯಿಂದ ವಾಹನ ಚಾಲಕನ ಕಾಲು ಮುರಿದಿದೆ. ಕಾರು ಡಿಕ್ಕಿಯಾಗಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 58 ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಕಾಂಗ್ರೆಸ್ಗೆ ಭರ್ಜರಿ ಗೆಲುವು; ಬಿಜೆಪಿಗೆ ಮುಖಭಂಗ!