‘ಚೆನ್ನಾಗಿ ಕೆಲಸ ಮಾಡುವವರು ಆತಂಕ ಪಡೋಹಾಗಿಲ್ಲ’ – ಸಿಟಿ ರವಿ
ಚೆನ್ನಾಗಿ ಕೆಲಸ ಮಾಡುವವರು ಆತಂಕ ಪಡುವ ಹಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಇಂದು ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಲಸಿಗರನ್ನು ಹೊರಗಿನವರು ಎನ್ನುವ ಪ್ರಶ್ನೆಯೇ ಇಲ್ಲ. ಯಾರಿಗೆ ಮಂತ್ರಿ ಸ್ಥಾನ ಎನ್ನುವುದು ಯಾವುದೂ ಕೂಡ ನಿರ್ಧಾರ ಆಗಿಲ್ಲ. ಕ್ಯಾಬಿನೆಟ್ ಗೆ ಯಾರು ಬರುತ್ತಾರೆನ್ನುವ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಸಚಿವರಾಗಿ ಒಳ್ಳೆ ಕೆಲಸ ಮಾಡಿದರೆ ಸ್ಥಾನ ಕೈತಪ್ಪುವ ಬಗ್ಗೆ ಯೋಚನೆ ಮಾಡಬೇಕಾಗಿಲ್ಲ. ಒಳ್ಳೆ ಕೆಲಸ ಮಾಡಿಲ್ಲ ಅಂದ್ರೆ ಪಕ್ಷ ಯೋಚಿಸುತ್ತದೆ. ನಿಜಕ್ಕೂ ಒಳ್ಳೆ ಕೆಲಸ ಮಾಡಿದವರು ಸಿಎಂ ಆಗ್ತಾರೆ. ಹಾಗಂತ ಎಲ್ಲರನ್ನೂ ಸಿಎಂ ಮಾಡಲು ಸಾಧ್ಯವಿಲ್ಲ” ಎಂದು ಮೈತ್ರಿ ಸರ್ಕಾರ ತ್ಯಜಿಸಿ ಬಿಜೆಪಿ ಸೇರಿದ ವಲಸೆ ಬಿಜೆಪಿಗರಿಗೆ ಕಿವಿ ಮಾತು ಹೇಳಿದ್ದಾರೆ.
‘ಆಪೇಕ್ಷೆ ಪಡುವುದು ಸಹಜ ಆದರೆ ಆಪೇಕ್ಷಪಟ್ಟವರನ್ನೆಲ್ಲಾ ಮಂತ್ರಿ, ಸಿಎಂ ಮಾಡಲು ಆಗುವುದಿಲ್ಲ. ಹೀಗಾಗಿ ಬಿಜೆಪಿ ಪಕ್ಷ ಸೇರಿದ ಮೇಲೆ ಅವರೆಲ್ಲಾ ನಮ್ಮವರು. ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತೋ ಅದರಂತೆ ನಾವು ಬದ್ಧರಾಗಿರಬೇಕು’ ಎಂದಿದ್ದಾರೆ.
ಹೀಗಾಗಿ ಬಾಂಬೆ ಫ್ರೆಂಡ್ಸ್ ಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಇಲ್ವಾ ಅನ್ನೋ ಅನುಮಾನ ಮೂಡಿದೆ. ಸಚಿವ ಸ್ಥಾನ ಕೈತಪ್ಪುವ ಆತಂಕದಲ್ಲೇ ಬೆಳಿಗ್ಗೆಯಿಂದಲೂ ಬಸವರಾಜ್ ಬೊಮ್ಮಾಯಿ ಬೆನ್ನುಬಿಡದೆ ಒಬ್ಬರಾದಮೇಲೊಬ್ಬರಂತೆ ಬಾಂಬೆ ಫ್ರೆಂಡ್ ಓಡಾಡುತ್ತಿರುವ ದೃಶ್ಯಗಳು ಕಂಡುಬದಿವೆ.
ಒಟ್ಟಿನಲ್ಲಿ ನೂತನ ಸಿಎಂ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.