ಅ.15ರಿಂದ ಚಿತ್ರಮಂದಿರಗಳು ಓಪನ್ ಆದ್ರೆ ಏನಾಗುತ್ತೆ ಅಂತಾರೆ ಮೈಸೂರಿನಲ್ಲಿ ಮಾಲೀಕರು..?
ದೇಶದಲ್ಲಿ ಕೊರೋನಾ ಮಹಾಮಾರಿ ಹರಡುತ್ತಿರುವ ನಡುವೆ ಅನ್ ಲಾಕ್ 5.0 ಮಾರ್ಗಸೂಚಿ ಜಾರಿಯಾಗಲಿದ್ದು ಮಾರ್ಗಸೂಚಿ ಅನ್ವಯ ಅಕ್ಟೋಬರ್ 15 ರಿಂದ ಚಿತ್ರಮಂದಿರ ಓಪನ್ ಮಾಡಲು ಅವಕಾಶ ನೀಡಲಾಗಿದೆ.
ಚಿತ್ರಮಂದಿರ ತೆರೆಯಲು ಸರ್ಕಾರ ಅವಕಾಶ ನೀಡಿದರೂ ಸಹ ಮೈಸೂರು ಮತ್ತು ಕೆಲ ಜಿಲ್ಲೆಗಳಲ್ಲಿ ಮಾತ್ರ ಚಿತ್ರಮಂದಿರಗಳು ಓಪನ್ ಆಗಲ್ಲ. ಹೌದು, ಮಾರ್ಗಸೂಚಿ ಅನ್ವಯ ಚಿತ್ರಮಂದಿರ ನಡೆಸೋದು ಕಷ್ಟ. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಹೀಗಾಗಿ ಚಿತ್ರಮಂದಿರ ತೆರೆಯಲು ಆಗುವುದಿಲ್ಲ ಎನ್ನುತ್ತಿದ್ದಾರೆ ಥಿಯೇಟರ್ ಮಾಲೀಕರು.
ಈ ಬಗ್ಗೆ ಮಾತನಾಡಿರುವ ಮೈಸೂರು ಥಿಯೇಟರ್ ಮಾಲೀಕರ ಸಂಘದ ಅಧ್ಯಕ್ಷ ರಾಜಾರಾಂ, ಮಾರ್ಗಸೂಚಿ ಅನ್ವಯ ಚಿತ್ರಮಂದಿರ ನಡೆಸೋದು ಕಷ್ಟವಾಗಿದೆ. ಮೈಸೂರಿನಲ್ಲಿ ಯಾವುದೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಥಿಯೇಟರ್ ಓಪನ್ ಮಾಡಿದ್ರೆ ಎಸ್. ಓ.ಪಿ ನಿಯಮಾನ್ವಯ ಹೆಚ್ಚು ಖರ್ಚಿನ ವೆಚ್ಚ ತಗುಲಲಿದೆ. ಸಿನಿಮಾ ಮಂದಿರ ತೆರೆದರೂ ಹೊಸ ಚಿತ್ರಕ್ಕೆ ಅನುಮತಿ ಸಿಕ್ಕಿಲ್ಲ. ಹಳೇ ಸಿನಿಮಾ ಮರುಬಿಡುಗಡೆಯಿಂದ ಥಿಯೇಟರ್ ವೆಚ್ಚ ಭರಿಸೋದು ಕಷ್ಟ. ಈಗಾಗಲೇ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗಿರುವ ಚಿತ್ರಗಳನ್ನು ನೋಡಲು ಜನ ಬರ್ತಾರಾ..? ಎಂದು ಮಾಲೀಕರು ಪ್ರಶ್ನಿಸಿದ್ದಾರೆ.
ಕನ್ನಡ ಚಿತ್ರೋದ್ಯಮದ ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಮಾಡ್ತಿಲ್ಲ. ಹೊಸ ನಟರ ಸಿನಿಮಾ ನೋಡಲು ಪ್ರೇಕ್ಷಕರು ಉತ್ಸುಕರಾಗಿಲ್ಲ. ಈ ಎಲ್ಲಾ ಹಿನ್ನೆಲೆಯಿಂದ ಸಿಂಗಲ್ ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತಿಲ್ಲ. ಸರ್ಕಾರ ಸಿನಿಮಾ ಮಂದಿರಗಳಿಗೆ ಶೇ. 50ರಷ್ಟು ಪ್ರೇಕ್ಷಕರ ಮಿತಿ ಹೇರಿದೆ. ಮಾರ್ಗಸೂಚಿ ಅನ್ವಯ ಸಿನಿಮಾ ಪ್ರದರ್ಶನ ಮಾಡಿದ್ರೆ ನಮಗೆ ಹೆಚ್ಚು ಹೊರೆ. ಇನ್ನೊಂದೆಡೆ ಪ್ರತಿವರ್ಷದ ಥಿಯೇಟರ್ ರೀನೆವಲ್ ವೆಚ್ಚವು ಹೆಚ್ಚಾಗ್ತಿದೆ. ಈಗಾಗಲೇ ಕೋವಿಡ್-19 ನಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಸರ್ಕಾರದಿಂದ ನಮಗೆ ಯಾವುದೇ ಸಹಾಯವಾಗಿಲ್ಲ. ಈ ಹಿನ್ನೆಲೆ ಸಿನಿಮಾ ಪ್ರದರ್ಶನ ಮಾಡೋದು ಕಷ್ಟವಾಗುತ್ತೆ ಎಂದು ಅವರು ಹೇಳಿದರು.