ರೈತ ಹೋರಾಟವನ್ನು ಬೆಂಬಲಿಸಿದ ಮಹಾತ್ಮ ಗಾಂಧಿ ಮೊಮ್ಮಗಳು; ಕೃಷಿ ಕಾಯ್ದೆ ಬಗ್ಗೆ ಅವರು ಹೇಳಿದ್ದೇನು?

ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟಕ್ಕೆ ಮಹಾತ್ಮ ಗಾಂಧಿಜಿಯ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಯ ಅವರು ಬೆಂಬಲ ನೀಡಿದ್ದು, ಗಾಜಿಪುರ ಗಡಿಗೆ ತೆರಳಿ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ.

ಗಾಂಧಿ ಪ್ರತಿಷ್ಠಾನದ ಇತರ ಪದಾಧಿಕಾರಿಗಳೊಂದಿಗೆ ಗಾಜಿಪುರ ಗಡಿಗೆ ತೆರಳಿದ ಅವರು, ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದರು. “ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ನಮ್ಮೊಂದಿಗೆ ಯಾವುದೇ ಪೊಲೀಸ್ ಬೆಂಗಾವಲು ಇಲ್ಲ. ನಾನು ಈ ದೇಶದ 87 ವರ್ಷದ ಹಿರಿಯ ನಾಗರಿಕಳಾಗಿದ್ದು, ರೈತರಿಗಾಗಿ ಇಲ್ಲಿಗೆ ಬಂದಿದ್ದೇನೆ. ರೈತರು ನಮ್ಮ ಜೀವನದುದ್ದಕ್ಕೂ ಆಹಾರವನ್ನು ನೀಡುತ್ತಾರೆ. ರೈತರಿಗೆ ಪ್ರಯೋಜನ ಸಿಗದಿದ್ದರೆ, ದೇಶಕ್ಕೂ ಯಾವುದೇ ಪ್ರಯೋಜನವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

“ನಾನು ಯಾವಾಗಲೂ ಸತ್ಯದೊಂದಿಗೆ ನಿಲ್ಲುತ್ತೇನೆ. ನನಗೆ ರಾಜಕೀಯದ ಬಗ್ಗೆ ಸಂಪೂರ್ಣ ಜ್ಞಾನವಿಲ್ಲ” ಎಂದು ಅವರು ಹೇಳಿದ್ದಾರೆ. ತಾರಾ ಅವರು ಗಾಜಿಪುರ ಭೇಟಿಯ ಸಮಯದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್‌ ಅವರೊಂದಿಗೆ ತಾರಾ ಗಾಂಧಿ ವೇದಿಕೆಯನ್ನು ಹಂಚಿಕೊಂಡರು.

ರೈತ ಹೋರಾಟದ ಸ್ಥಳಕ್ಕೆ ತಮ್ಮ ಭೇಟಿ ರಾಜಕೀಯ ರಹಿತ ಭೇಟಿ ಎಂದು ಅವರು ತಿಳಿಸಿದ್ದಾರೆ.

ಕೃಷಿಯಲ್ಲಿನ ತೊಂದರೆಗಳನ್ನು ನಿವಾರಿಸಲು ಹೊಸ ಕೃಷಿ ಕಾನೂನುಗಳನ್ನು ತರಲಾಗಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಎರಡೇ ದಿನಗಳ ಅಂತರದಲ್ಲಿ ಈ ಭೇಟಿ ನಡೆದಿದ್ದು, ಪ್ರತಿಭಟನಾ ನಿರತ ರೈತರು ತಮ್ಮ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಅವರು ಕರೆ ನೀಡಿದರು.

“ನಾವು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಮಾತುಕತೆಗೆ ಬಂದು ಸಮಸ್ಯೆಗಳನ್ನು ಬಗೆಹರಿಸುವಂತೆ ನಾನು ಮತ್ತೊಮ್ಮೆ ರೈತರನ್ನು ಒತ್ತಾಯಿಸುತ್ತೇನೆ” ಎಂದು ಲೋಕಸಭೆಯಲ್ಲಿ ಪ್ರಧಾನಿ ಹೇಳಿದ್ದರು. ಅಲ್ಲದೆ ಕೃಷಿ ಕಾನೂನುಗಳನ್ನು ಒಂದುವರೆ ವರ್ಷಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಸರ್ಕಾರವು ಹೇಳಿಕೊಂಡಿತ್ತು. ಆದರೆ ರೈತರು ಇದನ್ನು ತಿರಸ್ಕರಿಸಿದ್ದು ಕಾನೂನುಗಳನ್ನು ಶಾಶ್ವತವಾಗಿ ವಾಪಾಸು ಪಡೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ.

Read Also: ಗ್ರೇಟಾ ಥನ್ಬರ್ಗ್ “ಟೂಲ್ಕಿಟ್” ಪ್ರಕರಣ : ಬೆಂಗಳೂರಿನ ಯುವ ಹೋರಾಟಗಾರ್ತಿ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights