ಸುನಂದಾ ಪುಷ್ಕರ್ ಸಾವಿನ ಪ್ರಕರಣ : ಪತಿ ಶಶಿ ತರೂರು ನಿರ್ದೋಷಿ ಎಂದು ಕೋರ್ಟ್ ತೀರ್ಪು!
ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಪತಿ ಕಾಂಗ್ರೆಸ್ ಸಂಸದ ಶಶಿ ತರೂರು ನಿರ್ದೋಷಿ ಎಂದು ಕೋರ್ಟ್ ತೀರ್ಪು ಕೊಟ್ಟಿದೆ.
ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈ ಪ್ರಕರಣದಲ್ಲಿ ಶಶಿ ತರೂರು ನಿರ್ದೋಷಿ ಎಂದು ದೆಹಲಿಯ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ಮೂಲಕ ಶಶಿ ತರೂರ್ ಆರೋಪಮುಕ್ತರಾಗಿದ್ದು ಕಳೆದ ಏಳೂವರೆ ವರ್ಷಗಳ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ.
ಹೌದು… 2014ರ ಜನವರಿ 17ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಫೈವ್ ಸ್ಟಾರ್ ಹೊಟೇಲ್ ನ ಕೋಣೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ರು. ಬಳಿಕ ಈ ಸಾವಿನ ಹಿಂದೆ ಶಶಿ ಅವರ ಕೈವಾಡವಿದೆ ಎಂಬ ಆರೋಪಗಳಿಂದ ಎಫ್ಐಆರ್ ಕೂಡ ದಾಖಲಾಗಿತ್ತು. ಶಶಿ ತರೂರ್ ಅವರನ್ನು ಬಂಧಿಲಾಗಿತ್ತು.
ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ 2018ರ ಜುಲೈ 5 ರಂದು ಜಾಮೀನು ಮಂಜೂರಾಗಿದೆ. ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಶಶಿ ತರೂರ್ ನ್ಯಾಯಾಲಯಕ್ಕೆ ಮನವಿ ಕೂಡ ಮಾಡಿದ್ದರು.
ತಮ್ಮನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶಶಿ ತರೂರ್, ನ್ಯಾಯಾಲಯದ ತೀರ್ಪಿಗೆ ಅತ್ಯಂತ ಗೌರವದಿಂದ ಕೃತಜ್ಞನಾಗಿದ್ದೇನೆ. ಕಳೆದ ಏಳೂವರೆ ವರ್ಷಗಳ ಕಾಲ ಅತ್ಯಂತ ಹಿಂಸೆ ಅನುಭವಿಸಿದ್ದೇನೆ ಎಂದಿದ್ದಾರೆ.