ದಳಪತಿಗಳ ವಿರುದ್ದ ಮತ್ತೆ ಗುಡುಗಿದ ಸುಮಲತಾ : ಇಂದು ಗಣಿ ರೇಡ್!
ಕೇಂದ್ರದ ಸಚಿವರ ಮಧ್ಯೆ ಪ್ರವೇಶದಿಂದ ಕೊಂಚ ತಣ್ಣಗಾಗಿದ್ದ ಮಂಡ್ಯ ಗಣಿ ವಿವಾದ ಮತ್ತೆ ಚಿಗರೊಡದಿದೆ. ದಳಪತಿಗಳ ವಿರುದ್ದ ಸಂಸದೆ ಸುಮಲತಾ ಮತ್ತೆ ಗುಡುಗಿದ್ದು ಮಂಡ್ಯದಲ್ಲಿ ಗಣಿ ರೇಡ್ ಮುಂದುವರೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, “ಡ್ಯಾಂ ಬಿರುಕಿನ ಬಗ್ಗೆ ರೈತರು, ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆಂದು ಹೇಳುತ್ತಿರುವುದು ಗಣಿಗಾರಿಕೆ ಮೇಲಿನ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾದ್ರೆ ಗಣಿಗಾರಿಕೆಯಿಂದ ಡ್ಯಾಂ ಬಿರುಕು ಬಿಟ್ಟಿರುವುದನ್ನ ನೋಡಿಕೊಂಡು ನಾನು ಸುಮ್ಮನಿರಬೇಕಾಗಿತ್ತಾ?” ಎಂದು ಪ್ರಶ್ನೆ ಮಾಡಿದ್ದಾರೆ.
“ಡ್ಯಾಂ ಬಿರುಕು ಆಗಿದೆ ಎನ್ನುವ ಹೇಳಿಕೆ ನಾನು ಸಾರ್ವಜನಿಕವಾಗಿ ಎಲ್ಲಿಯೂ ಕೊಟ್ಟಿಲ್ಲ. ಈ ಬಗ್ಗೆ ದಿಶಾ ಸಭೆಯಲ್ಲಿ ಅಧಿಕಾರಿಗೆ ಪ್ರಶ್ನೆ ಕೇಳಿದ್ದೀನಿ. ಅದನ್ನು ಇವರು ರೈತರು, ಸ್ಥಳೀಯರು ಆತಂಕಗೊಂಡಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ಅಕ್ರಮವಾಗಿ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ. ಅದನ್ನ ಬಟಾಬಯಲು ಮಾಡಲು ಮುಂದಾಗಿದ್ದೇನೆ. ಗಣಿಗಾರಿಕೆಯಿಂದ ಕೆಆರ್ ಎಸ್ ನಲ್ಲಿ ಕಂಪನವಾಗುತ್ತಿದೆ. ಅಕ್ರಮಗಣಿಗಾರಿಕೆ ತಾರಕೀಕ ಅಂತ್ಯ ಕಾಣಬೇಕು ಅಲ್ಲಿವರೆಗೂ ನಾನು ಹೋರಾಟ ಮಾಡುತ್ತೇನೆ” ಎಂದು ರೆಬೆಲ್ ಲೇಡಿ ಹೇಳಿದ್ದಾರೆ.
“20 ಕಿ.ಮೀ ವರೆಗೆ ಗಣಿಗಾರಿಕೆ ಮಾಡಲೇಬಾರದು. ಆದರೂ ಮಾಡಲಾಗುತ್ತಿದೆ. ಕೇಂದ್ರ ಗಣಿ ಸಚಿವರಾದ ನಿರಾಣಿ ಅವರೊಂದಿಗೆ ನಾನು ಈ ಬಗ್ಗೆ ಮಾತನಾಡಿದ್ದೇನೆ. ಸ್ಥಳಕ್ಕೆ ಆಗಮಿಸಲು ನಾನು ಮನವಿ ಮಾಡಿದ್ದೇನೆ. ಅವರು ಬರುತ್ತೇನೆ ಎಂದು ಹೇಳಿದ್ದಾರೆ. ಅವರು ಬಂದು ಸ್ಥಳಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಾರೆ. ಸಿಬಿಐ ತನಿಖೆಗೆ ಕೊಡಲು ನಾನು ಮನವಿ ಮಾಡುತ್ತೇನೆ” ಎಂದಿದ್ದಾರೆ.
ಇನ್ನೂ ನಿರಾಣಿ ಅವರ ಸೂಚನೆಯಂತೆ ಎಲ್ಲಾ ಜನಪ್ರತಿನಿಧಿಗಳ ಮುಂದೆ ಬ್ಲಾಸ್ಟ್ ಟೆಸ್ಟಿಂಗ್ ಮಾಡಲೂ ಎಲ್ಲಾ ವ್ಯವಸ್ಥೆ ನಡೆಯುತ್ತಿದೆ. ಇಂದು ಬೇಬಿ ಬೆಟ್ಟ, ಕೆಆರ್ಎಸ್ ಗೆ ಸುಮಲತಾ ಗಣಿ ರೇಡ್ ಮಾಡಲಿದ್ದು, ಮಧ್ಯಹ್ನಾ 12.30ಕ್ಕೆ ಕೆಆರ್ ಎಸ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ನಂತರ ಬೇಬಿ ಬೆಟ್ಟಕ್ಕೆ 2.30ಕ್ಕೆ ಹೊರಡಲಿದ್ದಾರೆ. ಒಟ್ಟಿನಲ್ಲಿ ಸುಮಲತಾ ಅಕ್ರಮಗಣಿಗಾರಿಕೆ ವಿರುದ್ಧ ಹೋರಾಡಲು ಪಣತೊಟ್ಟಿದ್ದು, ಅದನ್ನ ನಿಲ್ಲಿಸುವವರೆಗೂ ಹಿಂಜರಿಯೋ ಮಾತೆ ಇಲ್ಲ ಎನ್ನುವಂತೆ ಕಾಣಿಸುತ್ತಿದೆ.