ಹಾವನ್ನೇ ಕಚ್ಚಿ ಸೇಡು ತೀರಿಸಿಕೊಂಡ ಭೂಪ : ಒಡಿಶಾದಲ್ಲಿ ವಿಲಕ್ಷಣ ಘಟನೆ!
ವ್ಯಕ್ತಿಯೊಬ್ಬ ಹಾವನ್ನೇ ಕಚ್ಚಿ ಸೇಡು ತೀರಿಸಿಕೊಂಡ ವಿಲಕ್ಷಣ ಘಟನೆ ಒಡಿಶಾದಲ್ಲಿ ನಡೆದಿದೆ.
45 ವರ್ಷದ ಬುಡಕಟ್ಟು ಸಮುದಾಯದ ಕಿಶೋರ್ ಬಾದ್ರಾ ಎಂಬ ವ್ಯಕ್ತಿ ಒಡಿಶಾದ ಜಜ್ಪುರ್ ಜಿಲ್ಲೆಯ ತಮ್ಮ ಗದ್ದೆಯಲ್ಲಿ ಹಾವನ್ನು ಕಚ್ಚಿ ಸಾಯಿಸಿದ್ದಾನೆ. ಗಾಂಭರಿಪತಿಯಾ ಗ್ರಾಮದ ಕಿಶೋರ್ ಬಾದ್ರ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದಾಗ, ಆತನ ಕಾಲಿಗೆ ಹಾವು ಕಚ್ಚಿದೆ.
ಕೋಪಗೊಂಡ ಬಾದ್ರಾ ಸೇಡು ತೀರಿಸಿಕೊಳ್ಳಲು ಹಾವನ್ನು ಸೆರೆಹಿಡಿದು ಕಚ್ಚಿದ್ದಾರೆ.
“ನಿನ್ನೆ ರಾತ್ರಿ ನಾನು ಕಾಲ್ನಡಿಗೆಯಲ್ಲಿ ಮನೆಗೆ ಮರಳುತ್ತಿದ್ದಾಗ ನನ್ನ ಕಾಲಿಗೆ ಏನೋ ಕಚ್ಚಿದಂತಾಯಿತು. ತಕ್ಷಣ ನಾನು ನನ್ನ ಟಾರ್ಚ್ ಅನ್ನು ಆನ್ ಮಾಡಿ ನೋಡಿದೆ. ಅಲ್ಲಿ ವಿಷಕಾರಿ ಹಾವು ಇರುವುದನ್ನ ನೋಡಿದೆ. ಕೋಪ ಬಂತು. ನನಗೆ ಕಚ್ಚಿದ ಹಾವಿಗೆ ನಾನು ಕಚ್ಚಬೇಕು ಎನಿಸಿತು. ಆಗ ಹಾವನ್ನು ನನ್ನ ಕೈಯಲ್ಲಿ ತೆಗೆದುಕೊಂಡು ಪದೇ ಪದೇ ಕಚ್ಚಿ ಸೇಡು ತೀರಿಸಿಕೊಂಡೆ. ಬಳಿಕ ಹಾವು ಸ್ಥಳದಲ್ಲೇ ಸತ್ತುಹೋಯಿತು “ಎಂದು ಬಾದ್ರಾ ಹೇಳಿದ್ದಾರೆ.
ಘಟನೆಯ ಬಳಿಕ ಬಾದ್ರಾ ಸತ್ತ ಹಾವಿನೊಂದಿಗೆ ತಮ್ಮ ಹಳ್ಳಿಗೆ ಹಿಂದಿರುಗಿದ್ದಾರೆ. ತನ್ನ ಪತ್ನಿಗೆ ಘಟನೆಯ ಬಗ್ಗೆ ಹೇಳಿದ್ದಾರೆ. ಬಾದ್ರಾರೊಂದಿಗೆ ಸತ್ತ ಹಾವನ್ನು ನೋಡದ ಜನ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ಸಲಹೆ ನೀಡಿದರು. ಆದರೆ ಅವರು ಆಸ್ಪತ್ರೆಗೆ ಹೋಗಲು ನಿರಾಕರಿಸಿದರಂತೆ. ಮನೆಯವರ ಒತ್ತಡಕ್ಕೆ ಮಣಿದು ರಾತ್ರಿ ಊರ ವೈದ್ಯರ ಬಳಿ ಸಲಹೆ ಪಡೆಯಲು ಹೋದ ಬಾದ್ರಾಗೆ ಯಾವ ತೊಂದರೆ ಕೂಡ ಆಗಿಲ್ಲ.
ಬಾದ್ರಾ ಗುರುವಾರ ಮಾತನಾಡಿ, “ನಾನು ವಿಷಕಾರಿ ಹಾವನ್ನು ಕಚ್ಚಿದರೂ, ನನಗೆ ಯಾವುದೇ ತೊಂದರೆ ಆಗಲಿಲ್ಲ. ನಾನು ಹಳ್ಳಿಯ ಬಳಿ ವಾಸಿಸುತ್ತಿರುವ ವೈದ್ಯರ ಬಳಿ ಹೋದೆ ಮತ್ತು ಗುಣಮುಖನಾಗಿದ್ದೇನೆ” ಎಂದು ಹೇಳಿದ್ದಾರೆ.