ರೋಹಿಣಿ ಸಿಂಧೂರಿ ವಿರುದ್ದ ಬೇಸರ; ಮೈಸೂರು ಪಾಲಿಕೆ ಆಯುಕ್ತೆ ಹುದ್ದೆಗೆ ಶಿಲ್ಪಾ ನಾಗ್ ರಾಜೀನಾಮೆ!
ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಶೀತಲ ಸಮರ ನಡೆಯುತ್ತಿದೆ. ಸ್ವತಂತ್ರವಾಗಿ ಕೆಲಸ ಮಾಡಲು ಜಿಲ್ಲಾಧಿಕಾರಿ ಬಿಡುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿರುವ ಪಾಲಕೆ ಆಯುಕ್ತೆ ಶಿಲ್ಪಾ ನಾಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿರುವ ಆಯುಕ್ತೆ ಶಿಲ್ಪಾ ನಾಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಕೆಲಸ ಮಾಡಲು ಬಿಡುತ್ತಿಲ್ಲ. ಇಂತಹ ದುರಂಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಬೇಡ. ನಾನಂತೂ ಕೆಲಸ ಮಾಡೋ ವ್ಯವಧಾನವನ್ನೇ ಕಳೆದುಕೊಂಡಿದ್ದೇನೆ ಎಂದು ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ.
ಐಎಎಸ್ ಅಧಿಕಾರಿಯಿಂದಲೇ ಮತ್ತೊಬ್ಬ ಐಎಎಸ್ ಅಧಿಕಾರಿಗೆ ಕಿರುಕುಳ ನೀಡೋದು ಸರಿಯಲ್ಲ. ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ನೋವು ತಂದಿದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದೇನೆ. ಇಲ್ಲಿ ಕೆಲಸ ಮಾಡುವುದಕ್ಕಿಂತ ರಾಜೀನಾಮೆ ನೀಡಿ ಹೊರಗೆ ಹೋಗೋದೆ ಬೆಟರ್ ಎನಿಸಿದೆ ಎಂಬುದಾಗಿ ತಮ್ಮ ರಾಜೀನಾಮೆ ನಿರ್ಧಾರವನ್ನು ಹೊರ ಹಾಕಿದ್ದಾರೆ.
ಈ ಉಸಿರು ಗಟ್ಟಿದಂತ ವಾತಾವರಣದಲ್ಲಿ ಕೆಲಸ ಮಾಡೋದಕ್ಕೆ ಇಷ್ಟ ಇಲ್ಲದಂತೆ ಆಗಿದೆ. ನನ್ನ ಟಾರ್ಗೆಟ್ ಮಾಡಿದ್ದರಿಂದ ನೋವು ಕೂಡ ಆಗಿದೆ. ಹೀಗಾಗಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವಂತ ನಿರ್ಧಾರವನ್ನು ಮಾಡಿದ್ದೇನೆ. ನಾನು ಸದಾ ಜಿಲ್ಲಾಧಿಕಾರಿಗೆ ಗೌರವ ಕೊಟ್ಟಿದ್ದೇನೆ. ಹಾಗಿದ್ದೂ ನನ್ನ ಮೇಲೆ ಹಠ, ಹಗೆ ಯಾಕೆ ಸಾಧಿಸುತ್ತಾ ಇದ್ದಾರೋ ನನಗೆ ಗೊತ್ತಿಲ್ಲ ಎಂಬುದಾಗಿ ಭಾವುಕರಾಗಿ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಜೂನ್ 14ರವರೆಗೆ ಲಾಕ್ಡೌನ್ ವಿಸ್ತರಣೆ; ಮತ್ತೆ ಒಂದು ವಾರ ಎಲ್ಲವೂ ಬಂದ್!