ಬಸ್ ಗಳ ಮಧ್ಯೆ ಅಪಘಾತ : ಏಳು ಜನ ಸಾವು – ಎಂಟು ಮಂದಿಗೆ ಗಾಯ!
ಯುಪಿಯ ಸಂಭಾಲ್ನಲ್ಲಿ ಎರಡು ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಬಹ್ಜೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ಲಹರಾವನ್ ಗ್ರಾಮದ ಆಗ್ರಾ-ಚಂದೌಸಿ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಮೃತರು ವಿವಾಹ ಕಾರ್ಯಕ್ರಮಕ್ಕೆಂದು ಚಂದೌನಿಯಿಂದ ಛಾಪ್ರಾಕ್ಕೆ ತೆರಳುತ್ತಿದ್ದರು. ಬಸ್ ಟೈರ್ ಲಹರಾವನ್ ಗ್ರಾಮದ ಬಳಿ ಪಂಕ್ಚರ್ ಆದ ಕಾರಣ ದುರಸ್ತಿಗಾಗಿ ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು. ಕೆಲ ಪ್ರಯಾಣಿಕರು ಕೆಳಗಿಳಿದು ಬಸ್ ರಿಪೇರಿ ಆಗುವುದನ್ನ ಕಾಯುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ವೇಗವಾಗಿ ಬಂದ ಬಸ್ ನಿಲ್ಲಿಸಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಹ್ಜೋಯಿ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಿದರು.
ನಿಲುಗಡೆ ಮಾಡಿದ ಬಸ್ಗೆ ಡಿಕ್ಕಿ ಹೊಡೆದ ಎರಡನೇ ಬಸ್ ಸ್ಥಳದ ಬಳಿ ಉರುಳಿಬಿದ್ದಿದೆ. ಅದರ ಚಾಲಕ ಮತ್ತು ಸಹ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.