ಕೋವಿಡ್ ನಿಯಮ ಉಲ್ಲಂಘಿಸಿ ಬಟ್ಟೆ ಮಾರಾಟ; ಬಟ್ಟೆ ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು!
ಕೊರೊನಾ ಎರಡನೇ ಅಲೆಯನ್ನು ಬ್ರೇಕ್ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಆದರೆ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಹಲವೆಡೆ ಕದ್ದು-ಮುಚ್ಚಿ ವ್ಯಾಪಾರ-ವ್ಯವಹಾರಗಳು ನಡೆಯುತ್ತಿವೆ. ಅಂತೆಯೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಿಯಮ ಉಲ್ಲಂಘಿಸಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ನಗರಸಭೆಯ ಪೌರಾಯುಕ್ತ ಮತ್ತು ಅಧಿಕಾರಿಗಳು ದಾಳಿ ಮಾಡಿದ್ದು, ಅಂಗಡಿಗೆ ಬೀಗ ಜಡಿದು, ಸೀಲ್ ಮಾಡಿದ್ದಾರೆ.
ಗಂಗಾವತಿಯಲ್ಲಿರುವ ಆರಾಧನಾ ಫ್ಯಾಬ್ರಿಕ್ಸ್ ಬಟ್ಟೆ ಅಂಗಡಿಯ ಮಾಲೀಕರು ಗ್ರಾಹಕರಿಗೆ ಕರೆ ಮಾಡಿ ಬರಮಾಡಿಕೊಂಡು ಕದ್ದುಮುಚ್ಚಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ತಿಳಿದ ಪೌರಾಯುಕ್ತ ಅರವಿಂದ ಜಮಖಂಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಯನ್ನು ಸೀಲ್ ಮಾಡಿದ್ದಾರೆ.
ಬಟ್ಟೆ ಅಂಗಡಿ ಮಾಲೀಕರಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ಮಾಡಿ ಕದ್ದುಮುಚ್ಚಿ ಜನರನ್ನು ಸೇರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದು ನಿಯಮ ಉಲ್ಲಂಘನೆ ಮಾಡುವ ಬಟ್ಟೆ ಅಂಗಡಿಗಳಿಗೆ ಕಠಿಣ ಲಾಕ್ ಡೌನ್ ಅವಧಿ ಮುಗಿಯುವ ತನಕ ಬೀಗ ಹಾಕಿ ಸೀಲ್ ಹಾಕಲಾಗುತ್ತದೆ ಎಂದು ಪೌರಾಯುಕ್ತ ಅರವಿಂದ ಜಮಖಂಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಸ್ತಿ ಚಾಂಪಿಯನ್ ಕೊಲೆ ಪ್ರಕರಣ: ಆರೋಪಿ ಸುಶೀಲ್ ಬಂಧನ ಮತ್ತು ಒಎಸ್ಡಿ ಹುದ್ದೆಯಿಂದ ಅಮಾನತು!