‘ಸೈನಿಕ’ನಿಗೆ ತಿವಿದ ಹೊನ್ನಾಳಿ ಹೋರಿ! : ಸಿಪಿವೈ 9 ಕೋಟಿ ಸಾಲ ಮಾಡಿದ್ದೇಕೆ?
ವಲಸೆ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಿದ ಬೆನ್ನಲ್ಲೇ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಕಿಚ್ಚು ದಿನೇ ದಿನೇ ಹೆಚ್ಚಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಸಿಪಿ ಯೋಗೇಶ್ವರ ಅವರ ಪಾತ್ರ ತುಂಬಾ ದೊಡ್ಡದಾಗಿದೆ ಎಂದು ಹೇಳಿದ ಸಚಿವ ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.
ಹೌದು.. ಇಂದು ದೆಹಲಿಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ ಸಿಪಿ ಯೇಗೇಶ್ವರ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. “ಸಚಿವಾರದ ರಮೇಶ್ ಜಾರಕಿಹೊಳಿ ನನಗೂ ಆಪ್ತರು. ನನಗಿಂತ ಹಿರಿಯರು. ಯಾವಾಗಲೂ ಸಿಪಿ ಯೋಗೇಶ್ವರ ಪರ ಬ್ಯಾಟಿಂಗ್ ಮಾಡುವ ರಮೇಶ್ ಜಾರಕಿಹೊಳಿಗೆ ನಾನು ಪ್ರಶ್ನೆ ಕೇಳುತ್ತೇನೆ. ಸಿಪಿ ಯೋಗಿಶ್ವರ್ ಅಪರೇಷನ್ ಮಾಡುವುದಕ್ಕಾಗಿ 9 ಕೋಟಿ ಸಾಲ ಮಾಡಿದ್ದಾರೆ, ಆರೋಗ್ಯ ಹಾಳು ಮಾಡಿಕೊಂಡಿದ್ದಾರೆಂದು ಹೇಳುತ್ತಾರೆ. ಮೊನ್ನೆಯಷ್ಟೇ ಅವರು ದೀಪಾವಳಿ ಹಬ್ಬಕ್ಕೆ ನಾಲ್ಕು ಬೆಲೆ ಬಾಳುವ ಕಾರುಗಳನ್ನು ಖರೀದಿಸಿದ್ದಾರೆ. ಬಿಡದಿಯಲ್ಲಿ 9 ಕೋಟಿ ಆಸ್ತಿಯನ್ನು ಮಗಳ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ನೂರಾರು ಕೋಟಿ ಬೆಲೆ ಬಾಳುವ ಬಂಗಲೆ ಇದೆ. ಇಷ್ಟೆಲ್ಲಾ ಇರುವವರು 9 ಕೋಟಿ ಸಾಲ ಯಾಕೆ ಮಾಡಿದ್ದಾರೆ?” ಎಂದು ರೇಣುಕಾಚಾರ್ಯ ಸಚಿವ ರಮೇಶ್ ಜಾರಕಿಹೊಳಿಗೆ ಪ್ರಶ್ನೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಬಿಜೆಪಿಯ ಸಿಎಂ, ಹೈಕಮಾಂಡ್ ನಂತೆ ಮಾತನಾಡುತ್ತಾರೆ. ಸಿಪಿ ಯೋಗೇಶ್ವರ್ ಅವರ ಮೇಲೆ ಎಷ್ಟು ಕೇಸ್ ಇದೆ. ಅದೆಲ್ಲವೂ ನನ್ನ ಬಳಿ ದಾಖಲಾತಿಗಳು ಇವೆ. ಅದನ್ನು ನಾನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ಮುಟ್ಟಿಸಿದ್ದೇನೆ ಎಂದಿದ್ದಾರೆ.
ಈಗಾಗಲೇ ದೇಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರ ರೇಣುಕಾಚಾರ್ಯ 12 ಜನ ಬಿಜೆಪಿ ಸಚಿವಾಕಾಂಕ್ಷಿಗಳ ಪರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಅಸಮತೋಲನ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಸಿಪಿ ಯೋಗೇಶ್ವರ್ ಅವರನ್ನು ಟಾರ್ಗೇಟ್ ಮಾಡಿದ್ದಾರೆ.
ಸಿಪಿ ಯೋಗೇಶ್ವರ್ ಅವರ ಮುಖ ನೋಡಿ ಬಿಜೆಪಿಗೆ ಉಳಿದ ವಲಸೆ ಶಾಸಕರು ಬಂದಿಲ್ಲ. ಬಿಜೆಪಿ ಸರ್ಕಾರ ರಚನೆಗೆ ಸಿಪಿವೈ ಯಾವ ಪಾತ್ರವನ್ನೂ ವಹಿಸಿಲ್ಲ. ಬಿಜೆಪಿ ಪಕ್ಷ ಕಟ್ಟಲು ಮೂಲ ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು ಎಂದು ಕಿಡಿ ಕಾರಿದ್ದಾರೆ.