ರೆಬೆಲ್ ಸ್ಟಾರ್ ಅಂಬರೀಶ್ 2ನೇ ವರ್ಷದ ಪುಣ್ಯಸ್ಮರಣೆ : ಸಮಾಧಿಗೆ ಪತ್ನಿ ಸುಮಲತಾ ಪೂಜೆ!
ಮಂಡ್ಯದ ಗಂಡು ಎಂದೇ ಖ್ಯಾತರಾದ ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ 2 ವರ್ಷ ಕಳೆದಿವೆ. ಇಂದು ಅವರ 2ನೇ ವರ್ಷದ ಪುಣ್ಯಸ್ಮರಣೆ. ಅಂಬರೀಷ್ ಅವರ ಎರಡನೇ ಪುಣ್ಯತಿಥಿಯ ಅಂಗವಾಗಿ ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಸ್ಮರಿಸಿಕೊಂಡರು.
ಸಂಸದೆ ಹಾಗೂ ಅವರ ಪತ್ನಿ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್, ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಅವರೆಲ್ಲಾ ಸೇರಿ ಕಂಠೀರವ ಸ್ಡುಡಿಯೊದಲ್ಲಿರುವ ಸಮಾಧಿ ಬಳಿ ತೆರಳಿ ಅಂಬರೀಷ್ ಅವರಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನಿಟ್ಟು ಭಕ್ತಿಯಿಂದ ಪೂಜಿಸಿದರು.
ಪತ್ನಿ ಸುಮಲತಾ ಪತ್ರದ ಮೂಲಕ ತಮ್ಮ ದುಖ:ವನ್ನು ಹೊರಹಾಕಿದ್ದಾರೆ. ‘ನಿನ್ನ ಮಾತು ಕೇಳಲು ಕಿವಿ ಮುಚ್ಚುತ್ತೇನೆ. ನಿನ್ನ ನೋಡಲು ಕಣ್ಣು ಮುಚ್ಚುತ್ತೇನೆ. ಆದರೆ ನನ್ನ ಹೃದಯ ಮುಚ್ಚಲು ಸಾಧ್ಯವಿಲ್ಲ. ಆದರೆ ಈ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಲು ಯಾವುದೇ ಹೃದಯಕ್ಕೆ ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನೂ ಸದಾ ಮೆಲುಕು ಹಾಕುತ್ತೇನೆ. ನಾನು ಪ್ರತಿ ಸಲ ತೆಗೆದುಕೊಳ್ಳುವ ಉಸಿರಿನಲ್ಲೂ ನೀವು ಇರುತ್ತೀರಿ. ನಿಮ್ಮ ಪ್ರೀತಿಯೇ ನನಗೆ ಶಕ್ತಿ ಹಾಗೂ ಧೈರ್ಯ. ನನ್ನ ಜೀವನದುದ್ದಕ್ಕೂ ಏಳು ಬೀಳು ಕಂಡಾಗ ನನಗೆ ಧೈರ್ಯ ನೀಡುವುದೇ ನಿಮ್ಮಪ್ರೀತಿ’ ಎಂಬ ದೀರ್ಘವಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ ಸುಮಲತಾ.
ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ ೨ ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ. pic.twitter.com/GWQxYep3qY
— Darshan Thoogudeepa (@dasadarshan) November 24, 2020
ದರ್ಶನ್ ಕೂಡ ಅಂಬಿಯನ್ನು ನೆನೆದಿದ್ದಾರೆ. ಅಂಬರೀಶ್ ದರ್ಶನ್ ಅವರನ್ನ ದೊಡ್ಡ ಮಗನಂತೆ ನೋಡಿಕೊಳ್ಳುತ್ತಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂಬಿ ಅವರನ್ನು ಅಪ್ಪಾಜಿ ಅಂತಲೇ ಕರೆಯುತ್ತಿದ್ದರು. ಅಂಬಿ ಅಗಲಿದಾಗ ವಿಷಯ ತಿಳಿದ ದರ್ಶನ್ ವಿದೇಶ ಶೂಟಿಂಗ್ ನಿಲ್ಲಿಸಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.
ಅಂಬಿಯನ್ನು ನೆನೆದು ಇಂದು ಟ್ವೀಟ್ ಮಾಡಿರುವ ದರ್ಶನ್, ಅಪ್ಪಾಹಿಯದ್ದು ನೇರ ನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದಿದ್ದಾರೆ.