Ranji Trophy : ಮೊದಲ ದಿನವೇ ಉಭಯ ತಂಡಗಳು ಆಲೌಟ್ – ಕರ್ನಾಟಕಕ್ಕೆ ಇನ್ನಿಂಗ್ಸ್ ಹಿನ್ನಡೆ
ಕರ್ನಾಟಕ ಹಾಗೂ ಬರೋಡಾ ತಂಡಗಳು ರಣಜಿ ಎಲೈಟ್ ಎ ಗುಂಪಿನ ಪಂದ್ಯ ಆರಂಭದ ದಿನದಂದೇ, ಉಭಯ ತಂಡಗಳು ಮೊದಲ ಇನ್ನಿಂಗ್ಸ್ ನಲ್ಲಿ ಆಲೌಟ್ ಆದವು. ಬೌಲರ್ ಗಳಿಗೆ ನೆರವು ನೀಡಿದ ಪಿಚ್ ನಲ್ಲಿ, ಮನೀಶ್ ಪಾಂಡೆ ಪಡೆ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ, 112 ರನ್ ಗಳಿಗೆ ಸರ್ವಪತನ ಹೊಂದಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಬರೋಡಾ ತಂಡ 223 ರನ್ ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ 2 ವಿಕೆಟ್ ನಷ್ಟಕ್ಕೆ 13 ರನ್ ಕಲೆ ಹಾಕಿದೆ. ಅನುಭವಿ ಕರುಣ್ ನಾಯರ್ ಹಾಗೂ ಸಿದ್ಧಾರ್ಥ್ ಕೆ.ವಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಅನುಭವಿ ಮನೀಷ್ ಪಾಂಡೆ (43), ವಿಕೆಟ್ ಕೀಪರ್ ಬಿ.ಆರ್ ಶರತ್ (30), ರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್ ಮನ್ಸ್ ರನ್ ಬರ ಅನುಭವಿಸಿದರು. ಬರೋಡಾ ತಂಡದ ಪರ ಲಕ್ಕನ್ ಮೆರಿವಾಲ್ ಹಾಗೂ ಭಾರ್ಗವ್ ಭಟ್ ತಲಾ ಮೂರು ವಿಕೆಟ್ ಕಬಳಿಸಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ತಂಡದ ಆರಂಭ ಕಳಪೆಯಾಗಿತ್ತು. ಮೂರನೇ ವಿಕೆಟ್ ಗೆ ವಿಷ್ಣು ಸೋಳಂಕಿ (69) ಹಾಗೂ ದೀಪಕ್ ಹೂಡಾ (51) ಸಮಯೋಚಿತ ಬ್ಯಾಟಿಂಗ್ ಮಾಡಿ, ತಂಡಕ್ಕೆ ಮುನ್ನಡೆ ದೊರಕಿಸಿ ಕೊಟ್ಟರು. ಯೂಸುಫ್ ಪಠಾಣ್ (36), ಸೋಯಬ್ ತೈ (23) ತಂಡದ ಮೊತ್ತ ಹಿಗ್ಗಿಸಿದರು. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಹಾಗೂ ಶುಭಾಂಗ್ ಹೆಗ್ಡೆ ತಲಾ 4 ವಿಕೆಟ್ ಉರುಳಿಸಿದರು.
ದ್ವಿತಿಯ ಇನ್ನಿಂಗ್ಸ್ ನಲ್ಲೂ ಕಳಪೆ ಆರಂಭ ಪಡೆದ ರಾಜ್ಯ ತಂಡ ಸೊನ್ನೆ ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಎರಡನೇ ದಿನ ಸಮಯೋಚಿತ ಬ್ಯಾಟಿಂಗ್ ಮಾಡಿ, ಬೃಹತ್ ಮೊತ್ತ ಕಲೆ ಹಾಕುವ ಜವಾಬ್ದಾರಿ ಮನೀಷ್ ಪಾಂಡೆ ಪಡೆಯ ಮೇಲಿದೆ.