ಇಂದಿನಿಂದ ರಂಜಾನ್ ಉಪವಾಸ ಆರಂಭ : ಸರ್ಕಾರದಿಂದ ಕೊರೊನಾ ಹೊಸ ಮಾರ್ಗಸೂಚಿ ಪ್ರಕಟ!
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಇಂದಿನಿಂದ ಆರಂಭವಾಗುವ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಒಂದು ತಿಂಗಳ ಕಾಲ ಆಚರಿಸುವ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಭಂಧನೆಗಳನ್ನು ಹಾಕಿದೆ. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಪ್ರಾರ್ಥನೆಗೆ ಐದು ನಿಮಿಷ ಮೊದಲು ಮಸೀದಿ ಓಪನ್ ಮಾಡಬೇಕು. ಕಂಟೈನ್ಮೆಂಟ್ ಜೋನ್ ಗಳಲ್ಲಿ ಇರುವ ಮಸೀದಿಗಳನ್ನು ಬಂದ್ ಮಾಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಜೊತೆಗೆ ಬೆಳಿಗ್ಗೆ ಆಹಾರ ಸೇವಿಸುವಾಗ ಅಥವಾ ಸಂಜೆ ಉಪವಾಸ ಬಿಡುವಾಗ ಸಹ ಮಸೀದಿಗೆ ಆಹಾರ ವಸ್ತು ತರಬಾರದು, ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು. ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಜೊತೆಗೆ 60 ವರ್ಷ ಮೇಲ್ಪಟ್ಟವರು, ಮಕ್ಕಳು ಮಸೀದಿಗೆ ಬರುವಂತಿಲ್ಲ.
ಸರತಿ ಅನುಸರಿಸಿ ಮಸೀದಿಗೆ ಬರಬೇಕು. ಮಾಸ್ಕ್ ಕಡ್ಡಾಯ, ಪ್ರತಿ ಹೊತ್ತಿನ ನಮಾಜ್ ಬಳಿಕ ಸ್ಯಾನಿಟೈಸರ್ ಅಳವಡಿಕೆ ಕಡ್ಡಾಯವಾಗಿದೆ. ಇಫ್ತಾರ್ಗಳನ್ನು ಮನೆಯಲ್ಲೇ ಮಾಡಿಕೊಳ್ಳಬೇಕು, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಜ್ ಮಾಡಬಹುದಾಗಿದೆ. ಆದರೆ ಪ್ರಾರ್ಥನೆ ಕೂಗುವ ಐದು ನಿಮಿಷಗಳ ಮೊದಲು ಮಸೀದಿ ತೆರೆಯಬೇಕು ಎಂದು ಸರ್ಕಾರ ತಿಳಿಸಿದೆ.