ರಾಜಕೀಯಕ್ಕೆ ರಜಿನಿಕಾಂತ್ ಎಂಟ್ರಿ ಇಲ್ಲ; ಜನಸೇವೆಗೆ ಮುಂದಾಗುತ್ತೇನೆ ಎಂದ ಸೂಪರ್ ಸ್ಟಾರ್!
ತಮಿಳುನಾಡು ಚುನಾವಣಾ ರಂಗ ರಂಗೇರುತ್ತಿದೆ. ಸಿನಿಮಾ ಸ್ಟಾರ್ಗಳು ಅಡ್ಡವಾಗಿರುವ ತಮಿಳು ರಾಜಕೀಯಕ್ಕೆ ನಟ ರಜಿನಿಕಾಂತ್ ಪ್ರವೇಶವೂ ಭಾರೀ ಕುತೂಹಲ ಮೂಢಿಸಿತ್ತು. ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಡಿಸೆಂಬರ್ ಅಂತ್ಯದಲ್ಲಿ ಘೋಷಿಸುವುದಾಗಿ ರಜಿನಿಕಾಂತ್ ಹೇಳಿದ್ದರು. ಅಂತಯೇ ಅವರ ನಿಲುವು ಪ್ರಕಟಿಸಿದ್ದು, ರಾಜಕೀಯದಿಂದ ದೂರ ಇದ್ದು, ಜನ ಸೇವೆ ಮಾಡುವುದಾಗಿ ಘೋಷಿಸಿದ್ದಾರೆ.
ರಕ್ತ ಒತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಜಿನಿಕಾಂತ್ ಇಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
“ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಲು ತುಂಬಾ ಬೇಸರವಾಗುತ್ತಿದೆ. ಈ ನಿರ್ಧಾರವನ್ನು ಪ್ರಕಟಿಸಲು ಎಷ್ಟು ನೋವಾಗುತ್ತಿದೆ ಎನ್ನುವುದು ನನಗೆ ಮಾತ್ರ ಗೊತ್ತಿದೆ. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೇ ನಾನು ಜನ ಸೇವೆ ಮಾಡುತ್ತೇನೆ. ಈ ನಿರ್ಧಾರವು ನನ್ನ ಅಭಿಮಾನಿಗಳಿಗೆ ಬೇಸರ ತರಬಹುದು. ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ” ಎಂದು ಹೇಳಿಕೆಯೊಂದರಲ್ಲಿ ರಜನೀಕಾಂತ್ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ರಜನಿ ಮಕ್ಕಳ್ ಮಂದ್ರಮ್ನ್ನು ಸ್ಥಾಪಿಸಿದ್ದ ರಜಿನಿಕಾಂತ್ ಡಿಸೆಂಬರ್ 31ರಂದು ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದರು. ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಐದು ತಿಂಗಳ ಮೊದಲು ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ರಜನಿ ಹೇಳಿದ್ದರು.
ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!