ಮಳೆ-ಚಳಿಯ ನಡುವೆ ಬೆಲೆ ಏರಿಕೆ ಬಿಸಿ; ಸೆಂಚುರಿ ಬಾರಿಸಿದ ಟೊಮೊಟೊ ಬೆಲೆ!
ಸುರಿಯುತ್ತಿರುವ ಧಾರಕಾರ ಮಳೆ ಮತ್ತು ಚಳಿಯ ನಡುವೆಯೂ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಪೆಟ್ರೋಲ್, ಡೀಸೆಲ್, ಈರುಳ್ಳಿ ಸೇರಿದಂತೆ ಹಲವು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಆ ಪಟ್ಟಿಗೆ ಟೊಮೊಟೊ ಕೂಡ ಸೇರಿಕೊಂಡಿದೆ. ಒಂದು ಕೆ.ಜಿ ಟೊಮೊಟೊ ಬೆಲೆ 100 ರೂ. ಮುಟ್ಟಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೊಟೊ ಬೆಲೆ ಒಂದು ಕೆ.ಜಿ ಗೆ 98-100 ರೂ. ಮತ್ತು ಹಾಪ್ಕಾಮ್ಸ್ ಮಳಿಗೆಗಳಲ್ಲಿ 93 ರೂ. ಆಗಿದೆ.
ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಬೆಳೆದಿದ್ದ ಟೊಮೊಟೊ ನಾಶವಾಗಿದೆ. ಮಾತ್ರವಲ್ಲದೆ, ಉಳಿದ ಟೊಮೊಟೊ ಕೂಡ ಹಾಳಾಗಿದೆ. ಹೀಗಾಗಿ, ಟೊಮೊಟೊ ಒಳಗೆ ಕೊಳೆತು ಹುಳು ಬರುತ್ತಿದ್ದು, ಅವುಗಳ ಮಧ್ಯೆ ಒಳ್ಳೆ ಟೊಮೊಟೊವನ್ನು ಆಯ್ದುಕೊಳ್ಳಬೇಕಾದ ಪರಿಸ್ಥಿತಿ ಇದೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ, ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ರಸ್ತೆ ಬದಿಗಳಲ್ಲಿಯೂ ಸಹ 100 ರೂ.ಗೆ ಮಾರಾಟ ಮಾಡಲಾಗುತ್ತದೆ. ಮಾಲ್ ಗಳಲ್ಲಿ ಕೆಜಿ 100 ರೂ. ಗೆ ಮಾರಾಟ ಮಾಡಲಾಗುತ್ತದೆ.
ಮೂರು ತಿಂಗಳ ಹಿಂದೆ 26 ರೂ.ಗೆ ಇದ್ದ ಈರುಳ್ಳಿ ಕೆಜಿಗೆ 53 ರೂ.ಗೆ ಏರಿಕೆಯಾಗಿದೆ. ಬಯಲು ಪ್ರದೇಶದಲ್ಲಿ ಬೆಳೆದ ಬೆಳೆಗಳು ಮಳೆಯ ರಭಸವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಲಿ ಹೌಸ್ ಗಳಲ್ಲಿ ಬೆಳೆದ ಬೆಳೆ ಚೆನ್ನಾಗಿದೆ ಎಂದು ತರಕಾರಿ ವ್ಯಾಪಾರಿ ಜಯಪ್ರಕಾಶ್ ಹೇಳಿದ್ದಾರೆ.
ಅಗತ್ಯ ಅಡುಗೆ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ವಾರದ ಬಜೆಟ್ ನಲ್ಲಿ ಏರುಪೇರಾಗುತ್ತಿದ್ದು, ಟೊಮೊಟೊ ಮಾತ್ರವಲ್ಲ, ಎಲ್ಲ ವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿದ್ದು, ಸರಿಯಾಗಿ ಊಟ ಮಾಡಲು ಕಷ್ಟವಾಗುತ್ತಿದೆ ಎಂದು ಸಾಕ್ಷಿ ಎಂಬ ಗೃಹಿಣಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಾರಿ ತಿಪಟೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಟೊಮೊಟೊ ಬೆಳೆ ಹಾನಿಯಾಗಿದೆ. ಕೋಲಾರದ ಭಾಗಗಳಲ್ಲಿ ಮಾತ್ರ ಬೆಳೆ ಉಳಿದುಕೊಂಡಿದೆ. ಮಳೆ ಬರದಿದ್ದರೇ ಬೆಲೆ ಕುಸಿಯುತ್ತದೆ ಎಂದು ಕೋಲಾರದ ಎಪಿಎಂಸಿ ಮಾರುಕಟ್ಟೆಯ ಮುನಿರಾಜ್ ಹೇಳಿದ್ದಾರೆ.
ತರಕಾರಿಗಳು, ಬೇಳೆಕಾಳುಗಳು ಮತ್ತು ಎಲ್ಪಿಜಿ ಬೆಲೆ ಏರಿಕೆಯಿಂದಾಗಿ ರೆಸ್ಟೋರೆಂಟ್ಗಳಲ್ಲಿ ಬೆಲೆ ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘಗಳು ಚರ್ಚೆ ನಡೆಸುತ್ತಿವೆ. ಚರ್ಚೆಯ ನಂತರ ಅವರಲ್ಲಿ ಹೆಚ್ಚಿನವರು ಶೇಕಡಾ 5-15 ರಷ್ಟು ದರವನ್ನು ಹೆಚ್ಚಿಸಿದ್ದಾರೆ.
ಕಳೆದ ವರ್ಷ, ಮೊದಲ ಲಾಕ್ಡೌನ್ಗೆ ಮೊದಲು, ಅಡುಗೆ ಎಣ್ಣೆಯ ಬೆಲೆ 15 ಲೀಟರ್ಗೆ 1,300 ರೂ ಇತ್ತುತ್ತು ಈಗ 2,500 ರೂ ಆಗಿದೆ. ಕಾಫಿ ಪುಡಿಯದ್ದು ಅದೇ ಸಮಸ್ಯೆಯಾಗಿದೆ. ಮಳೆಯಿಂದಾಗಿ ಹೆಚ್ಚಿನ ತರಕಾರಿಗಳು ಲಭ್ಯವಿಲ್ಲ, ಆದ್ದರಿಂದ ಬೆಲೆ ಹೆಚ್ಚಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ವಿವರಿಸಿದ್ದಾರೆ.
Read Also: ಕಾಂಗ್ರೆಸ್ನಲ್ಲಿ ಸಾಕಷ್ಟು ನೋವುಂಡು ಬಿಜೆಪಿ ಸೇರಿದ್ದೇನೆ: ಮಾಜಿ ಕಾಂಗ್ರೆಸ್ ಯುವ ಮುಖಂಡ