ಕೊರೊನಾದಿಂದ ಬಡತನ, ನಿರುದ್ಯೋಗ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 850 ಜನರು ಆತ್ಮಹತ್ಯೆ

ಕೊರೊನಾದಿಂದಾಗಿ ಎದುರಾಗಿರುವ ಬಡತನ ಮತ್ತು ಆರ್ಥಿಕ ಸಂಕಷ್ಟದ ಹೊರೆಯಿಂದಾಗಿ ರಾಜ್ಯದಲ್ಲಿ 850 ಜನರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಶನಿವಾರ, ಮೈಸೂರಿನಲ್ಲಿ 20 ವರ್ಷದ ಯುವತಿಯೊಬ್ಬರು ಆತ್ಮಹತ್ಯೆಯ ಹಾದಿ ಹಿಡಿದು, ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ.

ಜಿಲ್ಲೆಯ ಹೆಚ್‌ಡಿ ಕೋಟೆ ತಾಲ್ಲೂಕಿನ ಕಟ್ಟೇಮನುಗನಹಳ್ಳಿಯ 20 ವರ್ಷಕ್ಕಿಂತ ಒಳಗಿನ ಇಬ್ಬರು ಸಹೋದರರೂ ಕೂಡ ಇದೇ ರೀತಿಯತೀವ್ರ ಹೆಜ್ಜೆಯನ್ನು ಅನುಸರಿಸಿದ್ದಾರೆ. ಈ ಇಬ್ಬರೂ ಸಹೋದರರು ನಿರುದ್ಯೋಗದಿಂದಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ, ಚಾಮರಾಜನಗರದ ಎಚ್ ಮೂಕಹಳ್ಳಿಯ ನಾಲ್ವರ ಕುಟುಂಬವೊಂದು ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಗೆ ಬಲಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವರದಿಯಾಗಿರುವ ಇಂತಹ ಅನೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಇವು ಕೆಲವು ಮಾತ್ರ. ಬಡತನ, ಆರ್ಥಿಕ ಸಂಕಷ್ಟ, ನಿರುದ್ಯೋಗ ಮತ್ತು ವ್ಯಾಪಾರದಲ್ಲಿನ ನಷ್ಟ ಈ ಪ್ರಕರಣಗಳ ಹಿಂದಿನ ಕೆಲವು ಪ್ರಮುಖ ಕಾರಣಗಳಾಗಿವೆ. ರಾಜ್ಯಾದ್ಯಂತ ಈ ಕಾರಣಗಳಿಂದ ಆತ್ಮಹತ್ಯೆಗಳು ಪ್ರತಿನಿತ್ಯ ವರದಿಯಾಗುತ್ತಿವೆ.

ಕರ್ನಾಟಕ ಸರ್ಕಾರವು ಹೆಚ್ಚಿನ ಜನಸಂಖ್ಯೆಗೆ ಲಸಿಕೆ ಹಾಕಿದ್ದೇವೆ ಎಂದು ಹೆಮ್ಮೆ ಪಡುತ್ತಿದೆ. ಆದರೂ, ಆರ್ಥಿಕ ಸಂಕಷ್ಟ ಮತ್ತು ಬಡತನದ ಸಮಸ್ಯೆಯು ಜನರನ್ನು ತಮ್ಮ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವಂತಹ ತೀವ್ರತೆಗೆ ದೂಡುತ್ತಿದೆ. ಇದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ.

ಕರ್ನಾಟಕ ರಾಜ್ಯ ಪೊಲೀಸ್ ದತ್ತಾಂಶದ ಪ್ರಕಾರ, ಮಾರ್ಚ್ 2020ರಿಂದ (ರಾಜ್ಯದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ಸಂದರ್ಭ) ಮೇ 2021ರ ಅವಧಿಯಲ್ಲಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 850 ಕ್ಕೂ ಹೆಚ್ಚು ಆತ್ಮಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸುತ್ತದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಕರಣಗಳು ಕಡಿಮೆ ವರದಿಯಾಗಿವೆ.

ಒಟ್ಟು 850 ಪ್ರಕರಣಗಳಲ್ಲಿ 10 ವರದಕ್ಷಿಣೆ, 344 ಬಡತನ ಮತ್ತು ಆರ್ಥಿಕ ಸಂಕಷ್ಟ ಸೇರಿದಂತೆ ಇತರ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳಾಗಿವೆ. 373 ಕ್ಕಿಂತ ಹೆಚ್ಚು ಆತ್ಮಹತ್ಯೆಗೆ ಪ್ರಚೋದನೆಯಿಂದಾಗಿ ಸಂಭವಿಸಿವೆ ಎಂದು ಪೊಲೀಸ್ ಡೇಟಾ ಬಹಿರಂಗಪಡಿಸಿದೆ. ಇದರ ಜೊತೆಗೆ, ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಬಂಧಿತ ಸೆಕ್ಷನ್ ಅಡಿಯಲ್ಲಿ 123 ಕ್ಕೂ ಹೆಚ್ಚು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ವರದಿಯಾಗಿವೆ.

ಆರ್ಥಿಕತೆಯ ಕುಸಿತವು ಜನರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಅದರ ಮೇಲೆ ರಾಜಿ ಮಾಡಿಕೊಳ್ಳಲು ಅಸಮರ್ಥತೆ ಮತ್ತು ಭೌತಿಕ ಸೌಕರ್ಯಗಳ ಹಿಂದೆ ಓಡುವುದು ಕೂಡ ಇತರ ಕೆಲವು ಕಾರಣಗಳಾಗಿವೆ ಎಂದು ಅವರು ಹೇಳುತ್ತಾರೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.

ಇದನ್ನೂ ಓದಿ: ಯುವತಿ ಮೇಲೆ ಪೊಲೀಸ್‌ ಕಾನ್ಸ್‌ಟೇಬಲ್‌ನಿಂದ ನಿರಂತರ ಅತ್ಯಾಚಾರ; ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆಯ ರಕ್ಷಣೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights