ಬಯಲಾಯ್ತು ಸಿಎಂ ಯೋಗಿ ಬಗ್ಗೆ ಪೋಸ್ಟ್ಕಾರ್ಡ್ ಹರಿಬಿಟ್ಟ ಸುಳ್ಳು; ಆಕ್ಸಿಜನ್ಗೂ ಯೋಗಿಗೂ ಎಲ್ಲಿದೆ ನಂಟು!
ಮಹಾರಾಷ್ಟ್ರದ ಮುಖ್ಯಮಂತ್ರಿ ಆಕ್ಸಿಜನ್ ಪೂರೈಸುವಂತೆ ಪ್ರಧಾನಿಗೆ ಕೇಳಿಕೊಂಡರು. ದೆಹಲಿ ಮುಖ್ಯಮಂತ್ರಿ ಪ್ರಧಾನಿಯನ್ನು ಕೈಮುಗಿದು ಕೇಳಿಕೊಂಡರು. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗರೂ ಕೇಳಿಕೊಂಡರು. ಅದರೆ ಉತ್ತರ ಪ್ರದೇಶ ಸಂತ ಕಾವಿಧಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಎಂಟರಿಂದ ಹತ್ತು ಆಕ್ಸಿಜನ್ ಘಟಕಗಳನ್ನೇ ಸ್ಥಾಪಿಸಿದರು” ಎಂದು ಪೋಸ್ಟ್ ಕಾರ್ಡ್ ಮಹೇಂದ್ರ ಹೆಗಡೆ ಪೋಸ್ಟರ್ ಮಾಡಿದ್ದಾರೆ. ಅನಕ್ಷರಸ್ಥ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಅದನ್ನು ವ್ಯಾಪಕವಾಗಿ ಹಂಚುತ್ತಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಕ್ಸಿಜನ್ ಕೊಡಿ ಎಂದು ಕೇಂದ್ರವನ್ನು ಕೇಳದೇ ಇದ್ದರೆ ಅವರಂತಹ ಬೇಜವಾಬ್ದಾರಿ, ಅಮಾನವೀಯ, ಕ್ರೂರಿ ಮುಖ್ಯಮಂತ್ರಿ ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಯಾಕೆಂದರೆ ದೇಶದ ಉಳಿದ ಭಾಗಗಳಿಗಿಂತ ಉತ್ತರ ಪ್ರದೇಶದ ಆಸ್ಪತ್ರೆಗಳ ಸ್ಥಿತಿ ಚಿಂತಾಜನಕವಾಗಿದೆ. ಎರಡು ಆಸ್ಪತ್ರೆಗಳಂತೂ ಉತ್ತರ ಪ್ರದೇಶದ ಸಿಎಂಗೆ ಕ್ಯಾಕರಿಸಿ ಉಗಿದು ನೋಟಿಸ್ ಬೋರ್ಡಿನಲ್ಲಿ ನೋಟಿಸ್ ಅಂಟಿಸಿದೆ ಎಂದರೆ ವೈದ್ಯರ ಸಮೂಹ ಯಾವ ಪರಿ ಯೋಗಿ ಆದಿತ್ಯನಾಥ್ ಕಾರ್ಯನಿರ್ವಹಣೆಯ ಬಗ್ಗೆ ಅಸಮಾದಾನ ಹೊಂದಿದೆ ಎಂಬುದನ್ನು ಊಹಿಸಬಹುದು.
ಲಕ್ನೋದ ಮಯೋ ಆಸ್ಪತ್ರೆ ಮತ್ತು ಮೇಕ್ ವೆಲ್ ಆಸ್ಪತ್ರೆ ಒಂದೋ ಅಕ್ಸಿಜನ್ ಸಿಲಿಂಡರ್ ನೀಡಿ, ಇಲ್ಲಾಂದ್ರೆ ಕೊರೋನಾ ರೋಗಿಗಳನ್ನು ನಮ್ಮ ಆಸ್ಪತ್ರೆಯಿಂದ ಸ್ಥಳಾಂತರಿಸಿ ಎಂದು ನೋಟಿಸ್ ನೀಡಿದೆ.
ಮಾಯೊ ವೈದ್ಯಕೀಯ ಕೇಂದ್ರ ಮತ್ತು ಮೇಕ್ವೆಲ್ ಆಸ್ಪತ್ರೆಯಲ್ಲಿನ 160 ಕೊರೋನಾ ರೋಗಿಗಳು ಆಮ್ಲಜನಕದ ಬೆಂಬಲದಿಂದ ಬದುಕಿದ್ದಾರೆ. ಆದರೆ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ರೋಗಿಗಳನ್ನು ಕರೆದೊಯ್ಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ರೋಗಿಗಳ ಮನೆಯವರಿಗೆ ಸೂಚಿಸಿದೆ.
ಆಸ್ಪತ್ರೆಯ ಗೋಡೆಯಲ್ಲಿ ಅಂಟಿಸಲಾಗಿರುವ ಅಧಿಕೃತ ನೋಟಿಸಿನಲ್ಲಿ “ಉತ್ತರ ಪ್ರದೇಶ ಸಿಎಂ ಮತ್ತು ಕೇಂದ್ರ ಸರ್ಕಾರಕ್ಕೆ ಪದೇ ಪದೇ ವಿನಂತಿಸಿದ ನಂತರವೂ ನಮಗೆ ಸಾಕಷ್ಟು ಆಮ್ಲಜನಕ ಪೂರೈಕೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಯವಿಟ್ಟು ರೋಗಿಗಳನ್ನು ಇಲ್ಲಿಂದ ವಾಪಸ್ ಕರೆದೊಯ್ಯಿರಿ ಎಂದು ನಾವು ಆಮ್ಲಜನಕ ಬೆಂಬಲದಲ್ಲಿರುವ ರೋಗಿಗಳ ಕುಟುಂಬ ಸದಸ್ಯರನ್ನು ವಿನಂತಿಸುತ್ತಿದ್ದೇವೆ. ಅನಾನುಕೂಲತೆಗಾಗಿ ನಾವು ತುಂಬಾ ವಿಷಾದಿಸುತ್ತೇವೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರು ಹಿಡಿದ ಈ ಕಮಲದ ಚಿಹ್ನೆ ಯೋಗಿಯ ರ್ಯಾಲಿಯಲ್ಲಿ ತೆಗೆಯಲಾಗಿದ್ದಾ?
ಲಖನೌ ಮುಖ್ಯ ವೈದ್ಯಕೀಯ ಅಧಿಕಾರಿಗಳು ಮುಖ್ಯಮಂತ್ರಿ ಆದಿತ್ಯನಾಥ್ ಕಚೇರಿಗೆ ಬರೆದ ಪತ್ರದಲ್ಲಿ, “ಲಕ್ನೋದ ಗೋಯೋ ನಗರ, ಮೇಯೊ ಕೇಂದ್ರವು ಆಮ್ಲಜನಕದ ಪೂರೈಕೆಯ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದು ಕೊರೋನಾ ರೋಗಿಯ ಚಿಕಿತ್ಸೆಗೆ ತೀವ್ರವಾಗಿ ಅಡ್ಡಿಪಡಿಸುತ್ತಿದೆ ಎಂದು ನಿಮ್ಮ ಗಮನಕ್ಕೆ ತರಲಾಗಿದೆ. ನಮ್ಮ ಪ್ರಯತ್ನಗಳ ಹೊರತಾಗಿಯೂ, ಲಕ್ನೋದಲ್ಲಿ ಎಲ್ಲಿಯೂ ಆಮ್ಲಜನಕ ಲಭ್ಯವಿಲ್ಲದ ಕಾರಣ ಅಸಹಾಯಕರಾಗಿದ್ದೇವೆ. ಸರ್ಕಾರಿ ಆರೋಗ್ಯ ಕೇಂದ್ರದ ನಮ್ಮ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳನ್ನು ತುರ್ತು ಸ್ಥಳಾಂತರಿಸಲು / ವರ್ಗಾಯಿಸಲು ವ್ಯವಸ್ಥೆ ಮಾಡುವಂತೆ CMO ಗೆ ವಿನಂತಿಸಿದೆ” ಎಂದು ಬರೆಯಲಾಗಿದೆ. ಅದರ ಅರ್ಥ ಲಕ್ನೋದ ಯಾವ ಸರಕಾರಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಇಲ್ಲದಾಗಿದೆ.
“ಕಳೆದ ಒಂದು ವಾರದಿಂದ ನಾವು ಆಮ್ಲಜನಕದ ಪೂರೈಕೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂದು, ನಮ್ಮ ವಾಹನಗಳು ಏಳು ಗಂಟೆಗಳ ಕಾಲ ಸರಬರಾಜುದಾರರ ಬಳಿ ನಿಂತಿದ್ದಾವೆ. ಆದರೂ ಒಂದೇ ಒಂದು ಸಿಲಿಂಡರ್ ನಮಗೆ ಸಿಕ್ಕಿಲ್ಲ. ಕೊನೆಗೆ ದಾರಿಯಿಲ್ಲದೆ, ನಾವು ಈ ನೋಟಿಸ್ ಅನ್ನು ಅಂಟಿಸಬೇಕಾಯಿತು” ಎಂದು ಗೋಮತಿ ನಗರದ ಮೇಕ್ವೆಲ್ ಆಸ್ಪತ್ರೆಯ ಮಾಲೀಕ ವಿನಯ್ ಪ್ರತಾಪ್ ಸಿಂಗ್ ಹೇಳುತ್ತಾರೆ.
ಲಕ್ನೋದ ಎಲ್ಲಾ ಆಸ್ಪತ್ರೆಯ ವಾಹನಗಳನ್ನು ವಿವಿಧ ಆಮ್ಲಜನಕ ಪೂರೈಕೆದಾರರು ಮತ್ತು ಏಜೆನ್ಸಿಗಳ ಎದುರು ನಿಲ್ಲಿಸಲಾಗಿದೆ. ಈ ಮಧ್ಯೆ ವಜೀರ್ಗಂಜ್ನ ಆಲ್ಮೈಟಿ ಆಸ್ಪತ್ರೆಗೆ ದಾಖಲಾದ 50 ವರ್ಷದ ಮಹಿಳೆ ಆಮ್ಲಜನಕದ ಕೊರತೆಯಿಂದಾಗಿ ಬುಧವಾರ ಸಾವನ್ನಪ್ಪಿದ್ದಾರೆ.
“ಕಳೆದ ಕೆಲವು ದಿನಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಕನಿಷ್ಠ 10-15 ಜನರು ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ, ನನ್ನ ಚಿಕ್ಕಮ್ಮ ವೆಂಟಿಲೇಟರ್ ಬೆಂಬಲದಲ್ಲಿದ್ದರು. ನಾನು ವೈದ್ಯನಾಗಿರುವುದರಿಂದ ನಾನು ಸ್ವಂತವಾಗಿ ಆಮ್ಲಜನಕವನ್ನು ವ್ಯವಸ್ಥೆ ಮಾಡುತ್ತಿದ್ದೆ. ಆದರೆ ಇಂದು ಅದೂ ಸಾಧ್ಯವಾಗದೇ ನನ್ನ ಚಿಕ್ಕಮ್ಮ ಬಲಿಯಾದರು. ನನ್ನ ಚಿಕ್ಕಮ್ಮನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕಳೆದ ರಾತ್ರಿ ನಮಗೆ ತಿಳಿಸಲಾಯಿತು ಎಂದು ರೋಗಿಯ ಸಂಬಂಧಿಕರೇ ಆಗಿರುವ ವೈದ್ಯರೇ ಅಳುತ್ತಾರೆ.
ಉತ್ತರ ಪ್ರದೇಶದ ಎಲ್ಲಾ ಆಕ್ಸಿಜನ್ ಪೂರೈಕೆದಾರ ಏಜೆನ್ಸಿಗಳ ಎದುರು ಆಕ್ಸಿಜನ್ ಗಾಗಿ ವಾಹನಗಳು ಸಾಲುಗಟ್ಟಿ ನಿಂತಿದೆ. ಆಕ್ಸಿಜನ್ ಇಲ್ಲದೇ ಇರುವುದರಿಂದ ಐಸಿಯುನಲ್ಲಿರುವ ರೋಗಿಗಳನ್ನು ಹೊರ ಹಾಕುವ ನೋಟಿಸನ್ನು ಬಹಿರಂಗವಾಗಿ ಪ್ರದರ್ಶನ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ಇದ್ದು ಎಲ್ಲಾ ರೋಗಿಗಳ ಸ್ಥಳಾಂತರಕ್ಕೆ ಸರ್ಕಾರಿ ಮುಖ್ಯ ವೈದ್ಯಾಧಿಕಾರಿಗಳು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ಮುಖ್ಯವೈದ್ಯಾಧಿಕಾರಿ ಪತ್ರ ಮತ್ತು ಖಾಸಗಿ ಆಸ್ಪತ್ರೆಯ ನೋಟಿಸ್ ನೋಡಿದ ಯಾವ ಮನುಷ್ಯನೂ ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ಕ್ಷಣವೂ ಮುಂದುವರೆಯಲಾರ. ಆದರೆ ಸಂತ, ಕಾವಿಧಾರಿ ಯೋಗಿ ಆದಿತ್ಯನಾಥ್ ಮಾತ್ರ ಮಹೇಶ್ ವಿಕ್ರಂ ಹೆಗಡೆ ಹೇಳಿದಂತೆ ಕೇಂದ್ರ ಸರ್ಕಾರದ ಬಳಿಯೂ ಆಕ್ಸಿಜನ್ ಕೇಳದೇ ತಾನು ಮನುಷ್ಯನಲ್ಲ ಎಂಬುದನ್ನು ಸಾಭೀತು ಮಾಡಿದ್ದಾರೆ.
– ನವೀನ್ ಸೂರಿಂಜೆ
(ಆಧಾರ : ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಯುಪಿ ಎಡಿಶನ್)
ಇದನ್ನೂ ಓದಿ: ಯೋಗಿ ಆದಿತ್ಯಾನಾಥ್ ತಮ್ಮ ವಿರುದ್ಧದ ಪ್ರಕರಣಗಳನ್ನು ತಾವೇ ಹಿಂತೆಗೆದುಕೊಳ್ಳುತ್ತಿದ್ದಾರೆ: ಬಿಎಸ್ಪಿ ಸಂಸದ ಆರೋಪ