ರಾಜಕೀಯ ಅನಕ್ಷರತೆಯ ನಿವಾರಣೆಗಾಗಿ- “ದಿ ಪೊಲಿಟಿಕ್‌” ವೆಬ್‌ ಜರ್ನಲ್ ಸೆ.28ಕ್ಕೆ ಲೋಕಾರ್ಪಣೆ!

’ರಾಜಕೀಯ ಅನಕ್ಷರತೆಯ ನಿವಾರಣೆಗಾಗಿ’ ಎಂಬ ಧ್ಯೇಯ ವಾಕ್ಯದೊಂದಿಗೆ ನೂತನವಾಗಿ ಆರಂಭವಾಗಲಿರುವ ’ದಿ ಪಾಲಿಟಿಕ್’ ಕನ್ನಡ ವೆಬ್ ಜರ್ನಲ್‌  ಹುತಾತ್ಮ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನದಂದು ಸೆಪ್ಟೆಂಬರ್‌ 28 ರಂದು ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ಅವರು ’ದಿ ಪಾಲಿಟಿಕ್’ ಫೇಸ್‌ಬುಕ್ ಪೇಜ್ ಮೂಲಕ ಸೆಪ್ಟೆಂಬರ್‌ 28 ರಂದು ಸಂಜೆ 06:30 ಕ್ಕೆ ವೆಬ್‌ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಬಾನು ಮುಷ್ತಾಕ್, ಡಾ. ಸಿದ್ದನಗೌಡ ಪಾಟಿಲ್, ಇಂದೂಧರ ಹೊನ್ನಾಪುರ, ಅನಂತ ನಾಯಕ್ ಎನ್ ಭಾಗವಹಿಸಲಿದ್ದು ಪತ್ರಿಕೋದ್ಯಮದ ಪ್ರಚಲಿತ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

’’ಇದು ಜನರಾಜಕಾರಣದ ಚಿಂತನಾ ಚಾವಡಿಯಾಗಿದೆ, ರಾಜಕೀಯ ಎಂದರೆ ಅನೇಕರಿಗೆ ಅಸಹ್ಯ ಅನಿಸಬಹುದು. ಆಳುವ ರಾಜಕಾರಣದ ದುರ್ವಾಸನೆ ಜನರನ್ನು ರಾಜಕೀಯವೆಂದರೇನೇ ದೂರ ನಿಲ್ಲುವಂತೆ ಮಾಡಿರುವುದರಿಂದ ಇದು ಸಹಜವೆ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಆ ಹೊಲಸು ರಾಜಕಾರಣದ ಬಗ್ಗೆ ಅಲ್ಲ. ಬದಲಿಗೆ ಮೌಲ್ಯಗಳಲ್ಲಿ, ಮಾದರಿಯಲ್ಲಿ, ಮಾರ್ಗದಲ್ಲಿ ಅದಕ್ಕೆ ತದ್ವಿರುದ್ಧವಾಗಿರುವ ನಿಜ ರಾಜಕಾರಣದ ಬಗ್ಗೆ” ಎಂದು ದಿ ಪಾಲಿಟಿಕ್ ಸಂಪಾದಕರಾದ ಸಿದ್ದಪ್ಪ ಮೂಲಗೆಯವರು ತಿಳಿಸಿದ್ದಾರೆ.

“ಈ ವೆಬ್‌ ಜರ್ನಲ್ ಬದಲಾವಣೆಯಲ್ಲಿ ವಿಶ್ವಾಸ ಹೊಂದಿರುವ, ಬದಲಾವಣೆಯ ಚಕ್ರಕ್ಕೆ ಹೆಗಲು ನೀಡಲು ಸಿದ್ಧವಿರುವ ಪ್ರಜ್ಞಾವಂತ, ರಾಜಕೀಯ ಕಾರ್ಯಕರ್ತರ ವೈಚಾರಿಕ ತಾಣವಾಗಿದೆ. ಇದು ಯಾವುದೋ ಒಬ್ಬ ವ್ಯಕ್ತಿಯ, ಅಥವ ಒಂದು ಸಂಘಟನೆಯ, ಅಥವ ಒಂದು ಚಿಂತನೆಯ ವೆಬ್‌ಸೈಟ್ ಅಲ್ಲ. ಸರಿ ಮಾರ್ಗ ಹುಡುಕಲು ಶ್ರಮಿಸುತ್ತಿರುವ ಸಮಾನ ಮನಸ್ಕರ ಮುಕ್ತ ವೈಚಾರಿಕ ವೇದಿಕೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“21ನೇ ಶತಮಾನದ ಕಹಿ ವಾಸ್ತವದ ಮೂಲವನ್ನು ಗ್ರಹಿಸಲು ಹಾಗೂ ಹೊಸ ನಾಳೆಯ ಹಾದಿಯನ್ನು ಹೊಸೆಯಲು ಶ್ರಮಿಸುವುದು ಈ ‘ವಿಚಾರ ಮಂಟಪ’ದ ಉದ್ದೇಶವಾಗಿದ್ದು. ವಿವಿಧ ರಾಜಕೀಯ ಚಿಂತನಾ ಧಾರೆಗಳ ಮುಕ್ತ ಸಮಾಗಮ ‘ದಿ ಪಾಲಿಟಿಕ್’ನ ಆಶಯವಾಗಿದೆ” ಎಂದು ಸಿದ್ದಪ್ಪ ಮೂಲಗೆ ಹೇಳಿದ್ದಾರೆ.

”ದಿ ಪಾಲಿಟಿಕ್’’ ಕನ್ನಡ ವೆಬ್ ಜರ್ನಲ್‌ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕರಾದ ಸಿ. ಎಸ್. ದ್ವಾರಕನಾಥ್, ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಾಣೇಹಳ್ಳಿ, ರೈತಸಂಘದ ಮುಖಂಡ ನುಲೇನೂರು ಶಂಕರಪ್ಪ, ಸಾಹಿತಿ ಸಬಿತಾ ಬನ್ನಾಡಿ, ಪಿ. ಆರಡಿಮಲ್ಲಯ್ಯ ಕಟ್ಟೇರ, ಶಾರದ ಗೋಪಾಲ್, ಡಾ.ಶಿವಗಂಗಾ ರುಮ್ಮಾ, ಕನ್ನಡ ಚಿತ್ರನಟ ಚೇತನ್, ಡಾ.ಕೆ ಶರೀಫಾ, ಡಾ. ಪುರುಷೋತ್ತಮ ಬಿಳಿಮಲೆ, ಅರಳಿ ನಾಗರಾಜ್,  ಸೇರಿದಂತೆ ಹಲವಾರು ಗಣ್ಯರು ಶುಭಹಾರೈಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights