ರಾಜ್ಯ ರಾಜಧಾನಿಯಲ್ಲಿ ಮುಂದುವರೆದ ಕೊರೊನಾ ವ್ಯಾಕ್ಸಿನ್ ಗಾಗಿ ಹಾಹಾಕಾರ : ಆಸ್ಪತ್ರೆ ಮುಂದೆ ಕಾದು ಕಾದು ಸುಸ್ತಾದ ಜನ!
ರಾಜ್ಯ ರಾಜಧಾನಿಯಲ್ಲಿ ವ್ಯಾಕ್ಸಿನ್ ಗಾಗಿ ಹಾಹಾಕಾರ ಮುಂದುವರೆದಿದ್ದು ಆಸ್ಪತ್ರೆಗಳ ಮುಂದೆ ಜನ ಕಾದು ಕಾದು ಸುಸ್ತಾಗಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯ ಮುಂದೆ ಆಕ್ಸಿಜನ್ ಗಾಗಿ ಅಧಿಕ ಸಂಖ್ಯೆಯಲ್ಲಿ ಜನ ಕಾಯುತ್ತಿದ್ದಾರೆ. ಆದರೆ ಗಂಟೆಗಟ್ಟಲೆ ಕಾದರೂ ವ್ಯಾಕ್ಸಿನ್ ಸಿಗುವ ಲಕ್ಷಣಗಳೇ ಕಾಣದ ಹಿನ್ನಲೆಯಲ್ಲಿ ಜನ ಆಕ್ರೋಶಗೊಂಡಿದ್ದಾರೆ.
ಹೌದು… ಇಂದು ಬೆಳಿಗ್ಗೆ 5 ಗಂಟೆಯಿಂದ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯ ಮುಂದೆ ಆಕ್ಸಿಜನ್ ಗಾಗಿ ಜನ ಸರಸಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಕೇವಲ 150 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಘೊಷಿಸಿದ್ದು ಜನ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವ್ಯಾಕ್ಸಿನ್ ತೊಂದರೆ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದ ಜನ ಪ್ರತಿನಿಧಿಗಳ ಮಾತಿಗೂ ಗ್ರೌಂಡ್ ರಿಪೋರ್ಟ್ ಗೂ ತುಂಬಾನೇ ವ್ಯತ್ಯಾಸವಿದೆ.
ಕೊರೊನಾಕ್ಕೆ ರಾಮಬಾಣವಾದ ವ್ಯಕಾ್ಸಿನ್ ಗಾಗಿ ಅಧಿಕ ಸಂಖ್ಯೆಯಲ್ಲಿ ವಯಸ್ಸಾದವರು ಸರದಿ ಸಾಲಿನಲ್ಲಿ ಬೆಳಿಗ್ಗೆಯಿಂದಲೂ ಕಾಯುತ್ತಿದ್ದಾರೆ. ಆದರೆ ಗಂಟೆಗಟ್ಟಲೆ ಕಾದರೂ ಲಸಿಕೆ ಸಿಗದೆ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಒಂದು ಕಡೆ ಬೆಡ್, ಆಕ್ಸಿಜನ್, ಬೆಂಟಿಲೇಟರ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಇತ್ತ ವ್ಯಾಕ್ಸಿನ್ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ. ಎಲ್ಲಾ ವಿಚಾರದಲ್ಲಿ ಕಾಳ ಸಂತೆ ದಂಧೆ ನಡೆಯುತ್ತಿರುವದಕ್ಕೆ ಸರ್ಕಾರದ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಇದುವರೆಗೆ ರಾಜ್ಯಕ್ಕೆ 1.22 ಕೋಟಿ ಡೋಸ್ ಲಸಿಕೆ ಬಂದಿದೆ. 1.13 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 1.11 ಕೋಟಿ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ. ಉಳಿದಂತೆ ರಾಜ್ಯ ಸರ್ಕಾರ 11 ಲಕ್ಷ ಡೋಸ್ ಲಸಿಕೆಯನ್ನು ಖರೀಸಿದೆ.