ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ : ಭಾರಿ ಮಳೆಯಾಗುವ ಮನ್ಸೂಚನೆ…
ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣ ಅರ್ಭಟ ಜೋರಾಗಿದೆ. ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿಯ ಮಂದಿ ಬೆಚ್ಚಿ ಬಿದ್ದಿದ್ದಾರೆ. ಮೊನ್ನೆಯಿಂದಲ್ಲೇ ನಗರದಲ್ಲಿ ಕಪ್ಪು ಕಾರ್ಮೋಡ ಮಳೆಯ ಮನ್ಸೂಚನೆ ನೀಡಿತ್ತು. ಆದರೆ ನಿರೀಕ್ಷೆಯಂತೆ ಮಳೆಯಾಗಲಿಲ್ಲ. ಆದರೆ ನಿನ್ನೆ ಸಂಜೆ ಸುರಿದ ಮಳಗೆ ಬೆಂಗಳೂರು ತತ್ತರಿಸಿ ಹೋಗಿದೆ.
ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಮಾತ್ರವಲ್ಲದೇ ಕೆಲವೆಡೆ ಮನೆಗಳಿಗೂ ನೀರು ಹೊಕ್ಕಿವೆ. ಇಂದು ಕೂಡ ಮಳೆಯಾಗು ಸಾಧ್ಯತೆ ಹೆಚ್ಚಿದ್ದು ಸಿಲಿಕಾನ್ ಸಿಟಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮಾತ್ರವಲ್ಲದೇ ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಚಳಿಗಾಳಿಯೂ ಬೀಸಲಿದೆಯಂತೆ. ಮಧ್ಯಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದ್ದು ಇಂದು ನಗರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಳೆದ 2-3 ದಿನಗಳಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ. ಅನೇಕ ಕಡೆ ಮರಗಳು ಧರೆಗೆ ಉರುಳಿವೆ. ರಸ್ತೆಗಳಿಗೆ ನೀರು ತುಂಬಿ ಸಂಚಾರ ಸಾಧ್ಯವಾಗದೇ ಜನ ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಶಿವಾನಂದ ಸರ್ಕಲ್, ಕೊಡಿಗೇಹಳ್ಳಿ, ಕೆ.ಆರ್. ಸರ್ಕಲ್ ಬಳಿ ಅಂಡರ್ಪಾಸ್ನಲ್ಲಿ ನೀರು ತುಂಬಿ ಕೆರೆಯಂತಾಗಿತ್ತು. ಎಲೆಕ್ಟ್ರಾನಿಕ್ ಸಿಟಿ, ಮೆಜೆಸ್ಟಿಕ್, ಜಯನಗರ, ಬಸವನಗುಡಿ, ಮಲ್ಲೇಶ್ವರ, ರಾಜಾಜಿನಗರ, ಬನಶಂಕರಿ, ಪದ್ಮನಾಭನಗರ ಭಾಗಗಳಲ್ಲಿ ನಿನ್ನೆ ವರುಣನ ಅರ್ಭಟ ಜೋರಾಗಿತ್ತು.
ಇನ್ನೂ ಕರಾವಳಿಯ ಉಡುಪಿ, ಮಂಗಳೂರು, ಉತ್ತರ ಕನ್ನಡದಲ್ಲೂ ನಿನ್ನೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಇದೇ ರೀತಿಯ ಮಳೆ ರಾಜ್ಯಾದ್ಯಂತ ಇನ್ನೂ 3 ದಿನಗಳು ಮುಂದುವರೆಯಲಿದೆ.
ಹವಾಮಾನ ಇಲಾಖೆ ಪ್ರಕಾರ, ಇಂದಿನಿಂದ ಅ.13ರವರೆಗೂ ಕರ್ನಾಟಕದ ಬಹುತೇಕ ಕಡೆ ಮಳೆಯ ಅಬ್ಬರ ಇರಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆರಾಯನ ಆಗಮನವಾಗಲಿದೆ. ಈ ಮೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.