ಅರಸೀಕೆರೆಯಲ್ಲಿ ಆಪರೇಷನ್ ಕಮಲ; 10 ಲಕ್ಷ ರೂ. ಮುಂದಿಟ್ಟು ಪತ್ರಿಕಾಗೋಷ್ಟಿ ನಡೆಸಿದ ರೇವಣ್ಣ!
10 ಲಕ್ಷ ರೂ ನಗದನ್ನು ಮುಂದಿಟ್ಟುಕೊಂಡು ಅರಸೀಕೆರೆಯಲ್ಲಿ ಪ್ರತಿಕಾಗೋಷ್ಟಿ ನಡೆಸಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ, ಅರಸೀಕೆರೆ ನಗರಸಭೆಯಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಜೆಡಿಎಸ್ ಕೌನ್ಸಿಲರ್ಗಳನ್ನು ಬಿಜೆಪಿಗೆ ಸೆಳೆಯಲು 10 ಲಕ್ಷ ರೂ. ಆಮಿಷವೊಡ್ಡಿದೆ. ಅದೇ ಈ 10 ಲಕ್ಷ ಎಂದು ಆರೋಪಿಸಿದ್ದಾರೆ.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿದ ಅವರು, ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್ಆರ್ ಸಂತೋಷ್ ಅವರು ತಮ್ಮ ಬೆಂಬಲಿಗರಾದ ಸಿಕಂಧರ್ ಮತ್ತು ಹರ್ಷವರ್ಧನ್ ಅವರ ಮೂಲಕ ಜೆಡಿಎಸ್ನ ಮಹಿಳಾ ಕೌನ್ಸಿಲರ್ ಕಲೈರಾಸಿ ಅವರ ಮನೆಗೆ 10 ಲಕ್ಷ ರೂ. ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಕಲೈರಾಸಿ, ಜೆಡಿಎಸ್ ಕೌನ್ಸಿಲರ್ಗಳಾದ ಹರ್ಷವರ್ಧನ್, ಚಂದ್ರಶೇಖರಯ್ಯ, ಕವಿತಾದೇವಿ, ದರ್ಶನ್, ವಿಧಾದರ್ ಮತ್ತು ಆಯಿಷ ಸೈಯದ್ ಸಿಕಾಂದರ್ ಅವರಿಗೂ ಹಣದ ಆಮಿಷ ವೊಡ್ಡಲಾಗಿದೆ. ಮಾತ್ರವಲ್ಲದೆ, ಮುಂದೆ 1 ಕೋಟಿ ಮೊತ್ತದ ಸಿವಿಲ್ ಗುತ್ತಿಗೆ ನೀಡುವುದಾಗಿ ಸಂತೋಷ್ ಆಸೆ ತೋರಿಸಿದ್ದಾರೆ. ಈಗಾಗಲೇ ತಮ್ಮ ಪತಿ ಸುಧಾಕರ್ ಅವರಿಗೂ 1 ಕೋಟಿ ಮೊತ್ತದ ಗುತ್ತಿಗೆ ಕೊಡಿಸುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಚಿರಾಗ್ಗೆ ತೇಜಸ್ವಿ ಗಾಳ: ಪಾಸ್ವಾನ್ ಮುಂದೆ RSS – ಅಂಬೇಡ್ಕರ್ ಆಯ್ಕೆ!
ಸಂತೋಷ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲು ಬಿಡುತ್ತಿಲ್ಲ. ಅಲ್ಲದೆ, ಜೆಡಿಎಸ್ನ ನಗರಸಭಾ ಸದಸ್ಯರಿಗೆ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅರಸೀಕೆರೆಯಲ್ಲಿ ಆಪರೇಷನ್ ಕಮಲ ನಡೆಯುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಿಬಿಐ ತನಿಖೆ ನಡೆಸಬೇಕು ಎಂದು ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಂತೋಷ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಕಲೈರಾಸಿ ದೂರು ದಾಖಲಿಸಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿ, ಐಜಿ, ಎಸ್ ಪಿ ಮತ್ತು ಹಾಸನ ಜಿಲ್ಲಾಧಿಕಾರಿಗಳಿಗೆ ದೂರಿನ ಪ್ರತಿಗಳನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ಅವರದ್ದೇ ತಪ್ಪು? ಹಲವು ಪ್ರಶ್ನೆಗಳೊಂದಿಗೆ ಸಿಂಧೂರಿ ವಿರುದ್ದ ಗುಡಿಗಿದ IPS ಡಿ ರೂಪಾ!