ಬ್ರಿಟಿಷರನ್ನೇ ಭಾರತದಿಂದ ಓಡಿಸಿದವರಿಗೆ BJPಯನ್ನು ಅಧಿಕಾರದಿಂದ ಇಳಿಸುವುದೇ ಕಷ್ಟವಲ್ಲ?: ರಾಹುಲ್ಗಾಂಧಿ
ಇಡೀ ದೇಶವನ್ನೇ ತಮ್ಮ ದಾಸ್ಯದಲ್ಲಿರಿಸಿಕೊಂಡಿದ್ದ ಬ್ರಿಟೀಷರನ್ನೇ 74 ವರ್ಷಗಳ ಹಿಂದೆ ಭಾರತದಿಂದ ತೊಲಗಿಸಿದ್ದೇವೆ. ಇನ್ನು ಈಗ ಮೋದಿ ನೇತೃತ್ವದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಇಳಿಸುವುದು ಕಷ್ಟವಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಹೇಳಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ಗಾಂಧಿ, ಬಿಜೆಪಿಗರು ತಮ್ಮ ಸಿದ್ದಾಂತವನ್ನು ದೇಶಾದ್ಯಂತ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿಸುವ ಉದ್ದೇಶದಿಂದ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಅಲ್ಲದೆ, ಸಂಪತ್ತಿನ ವಿತರಣೆಯಲ್ಲಿ ಅಸಮಾನತೆಯನ್ನು ಹೆಚ್ಚಿಸಿದೆ. ದೇಶದ ಜನರನ್ನು ಮತ್ತಷ್ಟು ಬಡವರನ್ನಾಗಿಸಲು ಮುಂದಾಗಿದೆ. ಬ್ರಿಟಿಷರನ್ನೇ ದೇಶದಿಂದ ತೊಲಗಿಸಿದ ನಮಗೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಕಷ್ಟವೇನು ಅಲ್ಲ ಎಂದು ಹೇಳಿದ್ದಾರೆ.
ಯಾವ ರಾಜ್ಯದಿಂದ ಬಂದವರಾಗಿರಲಿ, ಯಾವ ಭಾಷೆ, ಯಾವ ಧರ್ಮ ಎಂದು ನೋಡದೆ ಬಡವರಿಗೆ ಅವರ ಬ್ಯಾಂಕ್ ಖಾತೆಗಳಿಗೆ ವರ್ಷದಲ್ಲಿ 72 ಸಾವಿರ ರೂಪಾಯಿ ನೀಡುವ ಯೋಜನೆಯಿಂದ ಅನೇಕರನ್ನು ಬಡತನದಿಂದ ಹೊರಗೆ ತರಬಹುದು. ಬಡಜನರು ಕನಿಷ್ಠ ಆದಾಯ ಹೊಂದಲು ನ್ಯಾಯ ಯೋಜನೆ ಜಾರಿಗೆ ತಂದರೆ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಮೂಲಕ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಬಹುದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲಸವಿಲ್ಲದೆ ಇರುವ ಸಮಯದಲ್ಲಿ ಬಡವರಿಗೆ ಜೀವನ ನಡೆಸಲು ನ್ಯಾಯ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ರಾಹುಲ್ ಗಾಂಧಿ ಸಂವಾದದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಮೊದಲ ಬಾರಿಗೆ ಪುದುಚೇರಿಯಲ್ಲಿ BJPಗೆ ಅಧಿಕಾರ!