ಕೈಗಾರಿಕೆಗಳಿಗೆ ಭೂಮಿ ಕೊಡಲ್ಲ; ಭೂಸ್ವಾಧೀನದ ವಿರುದ್ಧ ರೈತರ ಆಕ್ರೋಶ!
‘ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್’ (ಎಂಎಂಎಲ್ಪಿ) ಸ್ಥಾಪನೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಹಲಿಕುಂಟೆಯಲ್ಲಿರುವ 600 ಎರಕೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ನಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗಳಿಗೆ ನೀಡುವುದಿಲ್ಲ. ಇಂದು ಹಣದ ಆಸೆಗೆ ಭೂಮಿಕೊಟ್ಟರೆ, ಮುಂದೆ ಬಸ್ಸ್ಟಾಂಡ್ಗಳಲ್ಲಿ ಸೌತೆಕಾಯಿ, ಕಳ್ಳೆಕಾಯಿ ಮಾರಬೇಕಾಗುತ್ತದೆ ಎಂದು ರೈತರು ಹೇಳಿದ್ದಾರೆ.
ಕೈಗಾರಿಕೆಗೆ ಭೂಮಿ ಕೊಡದೇ ಇರುವುದಕ್ಕಾಗಿ ಇಂದು ರೈತರು ಹುಲಿಕುಂಟೆಯಲ್ಲಿ ಸಭೆ ನಡೆಸಿದ್ದಾರೆ.
ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಅದರೆ, ಈಗಾಗಲೇ ದಾಬಸ್ ಪೇಟೆಯ ಬಳಿ ಸಾವಿರಾರು ಎರಕೆ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನ ಮಾಡಿಕೊಳ್ಳಲಾಗದೆ. ಆದರೆ, ವರ್ಷಗಳೇ ಕಳೆದರೂ ಆ ಭೂಮಿ ಪಾಳು ಬಿದ್ದಿದೆ. ಯಾವುದೇ ಕಾರ್ಖಾನೆಗಳು ಸ್ಥಾಪನೆಯಾಗಿಲ್ಲ. ಹೀಗಿರುವಾಗ ಕೈಗಾರಿಕೆ ಸ್ಥಾಪನೆ ನೆಪವೊಡ್ಡಿ ನಮ್ಮ ನೂರಾರು ಎಕರೆ ಕೃಷಿ ಭೂಮಿ ವಶಪಡಿಸಿಕೊಂಡು ರೈತರನ್ನು ಬೀದಿಪಾಲು ಮಾಡುವುದು ಸರಿಯಾದ ಕ್ರಮವಲ್ಲ ಎಂದು ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.
ಇದನ್ನೂ ಓದಿ: ನ. 26-27ರಂದು ರೈತ-ಕಾರ್ಮಿಕ ಐತಿಹಾಸಿಕ ಹೋರಾಟಕ್ಕೆ ಸಜ್ಜಾಗುತ್ತಿದೆ ಭಾರತ!
‘ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೃಗಾರಿಕೆಗಳು ಆರಂಭವಾಗಿದ್ದರಿಂದಾಗಿ ನಮ್ಮೂರಿನಲ್ಲಿ ಕುಡಿಯಲು ನೀರು ಯೋಗ್ಯವಿಲ್ಲದಷ್ಟು ಅಂತರ್ಜಲ ಕಲುಷಿತವಾಗಿದೆ. ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಸ್ಥಳೀಯರಿಗೆ ಹಾಗೂ ಭೂಮಿ ಕಳೆದುಕೊಳ್ಳುವ ಕುಟುಂಬದವರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕೈಗಾರಿಕೆಗಳಲ್ಲಿ ಫ್ಯಾಕ್ಟರಿಗಳ ಬಾಗಿಲು ಕಾವಲು, ಕಸ ಗುಡಿಸುವ ಕೆಲಸಗಳು ಮಾತ್ರ ಸ್ಥಳೀಯರಿಗೆ ನೀಡಲಾಗುತ್ತಿದೆ. ಉತ್ತರ ಭಾರತದ ಜನರೇ ಕೈಗಾರಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ. ಅರ್ಹತೆ ಇದ್ದರೂ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ಕುಮಾರ್ ಆರೋಪಿಸಿದ್ದಾರೆ.
ಹಣದ ವ್ಯಾಮೋಹಕ್ಕೆ ಒಳಗಾಗಿ ಒಮ್ಮೆ ಕೃಷಿ ಭೂಮಿ ಕಳೆದುಕೊಂಡರೆ ಮತ್ತೆ ಸಂಪಾದನೆ ಮಾಡುವುದು ಕಷ್ಟವಾಗಲಿದೆ. ಹೀಗಾಗಿ ತಾಲ್ಲೂಕಿನಲ್ಲಿ ಈಗಾಗಲೇ ಇರುವ ಕೈಗಾರಿಕೆಗಳ ಸಂಖ್ಯೆಯೇ ಹೆಚ್ಚಾಗಿದೆ. ಕೈಗಾರಿಕೆಗಳೇ ಇಲ್ಲದ ತಾಲ್ಲೂಕುಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಮಾಡಲಿ. ಕೈಗಾರಿಕೆಗಳಷ್ಟೇ ಕೃಷಿ ಭೂಮಿ ಇರಬೇಕು. ಹಿರಿಯರ ನೆಲೆ ಉಳಿಸಿಕೊಳ್ಳಲು ಸದ್ಯಕ್ಕೆ ಹೋರಾಟವೇ ಇರುವ ಏಕೈಕ ಮಾರ್ಗವಾಗಿದೆ. ನಮ್ಮ ಭೂಮಿ ಕಳೆದುಕೊಂಡರೆ ಬಸ್ ನಿಲ್ದಾಣಗಳಲ್ಲಿ ಸೌತೆಕಾಯಿ, ಕಳ್ಳೆಕಾಯಿ ಮಾರುವ ಸ್ಥಿತಿ ಬರಲಿದೆ. ನಮ್ಮ ಮಕ್ಕಳು ಕೈಗಾರಿಕೆಗಳ ಮುಂದೆ ಕೆಲಸಕ್ಕಾಗಿ ಕೈಕಟ್ಟಿ ನಿಲ್ಲುವ ಸ್ಥಿತಿ ಬರಲಿದೆ ಎಂದು ಸ್ಥಳೀಯ ರೈತರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?