ಕಾಂಗ್ರೆಸ್ ಹೊರಗಿಟ್ಟು NCP ನೇತೃತ್ವದಲ್ಲಿ 8 ಪಕ್ಷಗಳ ಸಭೆ; ಸಜ್ಜಾಗುತ್ತಿದೆಯೇ ತೃತೀಯ ರಂಗ!
2024ರ ಚುನಾವಣೆಗೆ ದೇಶದಲ್ಲಿರುವ ವಿವಿಧ ರಾಜ್ಯಗಳ ಪ್ರದೇಶಿಕ ಪಕ್ಷಗಳು ಈಗಿಂದಲೆ ಸಿದ್ದತೆಗೆ ತೊಡಿವೆ ಎಂಬುದು ಕಾಣುತ್ತಿದೆ. ಮಂಗಳವಾರ ಎನ್ಸಿಪಿ ನಾಯಕ ಶರದ್ ಪವಾರ್ ಅವರ ಮನೆಯಲ್ಲೆ ಪ್ರಮುಖ 8 ಪಕ್ಷಗಳು ಸಭೆ ನಡೆಸಿವೆ. ಈ ಸಭೆಯಲ್ಲಿ ಟಿಎಂಸಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಎಡಪಕ್ಷಗಳು ಭಾಗಿಯಾಗಿವೆ. ಆದರೆ, ಎನ್ಸಿಪಿ ಯುಪಿಎ ಮೈತ್ರಿಕೂಟದ ಭಾಗವಾಗಿದ್ದರೂ, ಕಾಂಗ್ರೆಸ್ ಈ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಇದು ಮುಂದಿನ ಲೋಕಸಭಾ ಚುನಾವಣೆಗೆ ತೃತೀಯ ರಂಗವನ್ನು ಸಜ್ಜುಗುತ್ತಿದೆ ಎಂದು ಹೇಳಲಾಗುತ್ತಿದೆ.
ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಪಿ ಶಾ, ಮಾಜಿ ರಾಯಭಾರಿ ಕೆ.ಸಿ.ಸಿಂಗ್ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಓಮರ್ ಅಬ್ದುಲ್ಲಾ, ಆರ್ಎಲ್ಡಿಯ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಘನ್ಶ್ಯಾಮ ತಿವಾರಿ, ಎಎಪಿ ನಾಯಕ ಸುಶೀಲ್ ಗುಪ್ತಾ, ಸಿಪಿಐನ ಬಿನೊಯ್ ವಿಶ್ವಮ್ ಮತ್ತು ಸಿಪಿಎಂನ ನಿಲೋತ್ಪಾಲ್ ಬಸು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಇದು ರಾಜಕೀಯ ಸಭೆಯಲ್ಲ. ಸಮಾನ ಮನಸ್ಕರ ನಡುವಿನ ಮಾತುಕತೆಯಷ್ಟೇ ಎಂದು ರಾಷ್ಟ್ರ ಮಂಚ್ನ ಸ್ಥಾಪಕ ಸದಸ್ಯ ಮಜೀದ್ ಮೆಮನ್ ಹೇಳಿದ್ದಾರೆ.
“ಈ ಸಭೆ ನಾವು ಎಲ್ಲ ಸಮಾನ ಮನಸ್ಕ ಜನರನ್ನು ಕರೆದಿದ್ದೇವೆ. ನಾವು ಕಾಂಗ್ರೆಸ್ ಮುಖಂಡರನ್ನು ಕೂಡ ಆಹ್ವಾನಿಸಿದ್ದೇವು. ನಾನೇ ಖುದ್ದಾಗಿ ವಿವೇಕ್ ತನ್ಹಾ, ಮನೀಶ್ ತಿವಾರಿ, ಅಭಿಷೇಕ್, ಮನು ಸಿಂಗ್ವಿ, ಶತ್ರುಘ್ನ ಸಿನ್ಹಾರನ್ನು ಸಭೆಗೆ ಕರೆದಿದ್ದೇನೆ. ಆದರೆ ಅವರು ಬರಲು ಸಾಧ್ಯವಾಗಲಿಲ್ಲ. ನಾವು ಕಾಂಗ್ರೆಸ್ ಅನ್ನು ಆಹ್ವಾನಿಸಲಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಭೆಗೆ ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಲಾಗಿತ್ತು. ಆದರೆ, ”ರಾಜಕೀಯದ ಬಗ್ಗೆ ಚರ್ಚಿಸುವ ಸಮಯ ಇದಲ್ಲ” ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಹೇಳಿರುವುದಾಗಿ ತಿಳಿದು ಬಂದಿದೆ.
“ರಾಷ್ಟ್ರ ಮಂಚ್ನ ಮುಖ್ಯಸ್ಥರಾದ ಯಶ್ವಂತ್ ಸಿನ್ಹಾ ಅವರು ಪವಾರ್ರನ್ನು ಭೇಟಿಯಾಗಬೇಕು ಎಂದು ಕೇಳಿದ್ದರು. ಅವರ ಕರೆಗೆ ಓಗೊಟ್ಟು ಈ ಸಭೆ ನಡೆದಿದೆ” ಎಂದು ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: CAA ವಿರೋಧಿ ಹೋರಾಟ; ಶಾಸಕ, ಹೋರಾಟಗಾರ ಅಖಿಲ್ ಗೊಗೊಯ್ ವಿರುದ್ದದ ಪ್ರಕರಣ ಖುಲಾಸೆ!