ಕರ್ರಗಿರುವವರನ್ನು ಕರಿಯ ಎನ್ನದೆ ಬಿಳಿಯ ಎನ್ನಬೇಕೇ?: ಹೆಚ್ಡಿಕೆ ವಿರುದ್ದ ವರ್ಣಭೇದದ ಹೇಳಿಕೆ ಸಮರ್ಥಿಸಿಕೊಂಡ ಜಮೀರ್
ಕರಿಯನ್ನು ಕರಿಯ ಎನ್ನದೇ ಬಿಳಿಯ ಅನ್ನೋಕೆ ಆಗುತ್ತದೆಯೇ ಎಂದು ಪ್ರಶ್ನಿಸಿರುವ ಶಾಸಕ ಜಮೀರ್ ಅಹಮದ್, ತಾವು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ವರ್ಣಭೇದ ನಾಲಿಗೆ ಹರಿಬಿಟ್ಟಿದ್ದ ಜಮೀರ್, ಜೆಡಿಎಸ್ ನಾಯಕ ಹೆಚ್ಡಿಕೆ ಅವರನ್ನು ಕರಿಯ ಎಂದು ಕರೆದು, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಂದ ತೀವ್ರ ಟೀಕೆಗೆ ಒಳಗಾಗಿದ್ದರು.
ಅವರು ಇರೋದೇ ಕಪ್ಪು, ಅವರನ್ನು ಕರಿಯ ಎಂದು ಕರೆಯುವುದರಲ್ಲಿ ತಪ್ಪೇನಿದೆ. ಬೆಳ್ಳಗೆ ಇದ್ದವರನ್ನು ಕರಿಯ ಅಂದಿದ್ದರೆ ತಪ್ಪು, ಅವರು ಕಪ್ಪು ಇರೋದರಿಂದಲೇ ಅವರನ್ನು ಕರಿಯ ಎಂದು ಕರೆದೆ. ಇದು ತಪ್ಪಾಗಿದ್ದರೆ ನನ್ನ ವಿರುದ್ಧ ದೂರು ನೀಡಲಿ ಎಂದು ಸಮರ್ಥಿಸಿಕೊಂಡಿದ್ದಾರೆ.
“ಎರಡು ಬಾರಿ ನನ್ನ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ, ನನಗೆ ದೇವರು ಹೈಟ್ ಕೊಟ್ಟಿಲ್ಲ, ಹಾಗಾಗಿ ನನ್ನನ್ನು ಹಾಗೇ ಕರೆದರೆ ನನಗೆ ಬೇಸರವಿಲ್ಲ” ಎಂದು ಜಮೀರ್ ಅಹ್ಮದ್ ಹೇಳಿದರು.
“ಕುಮಾರಸ್ವಾಮಿಯವರು ವಿದೇಶದವರ ತರ ಇದ್ದರೆ, ನನ್ನ ಹೇಳಿಕೆ ತಪ್ಪಾಗುತ್ತಿತ್ತು. ಭಗವಂತ ಅವರನ್ನು ಹುಟ್ಟಿದಾಗಲೇ ಕರ್ರಗೆ ಭೂಮಿಗೆ ಕಳುಹಿಸಿದ್ದಾರೆ. ಹಾಗಾಗಿ ನನ್ನ ಹೇಳಿಕೆ ಹೇಗೆ ತಪ್ಪಾಗುತ್ತದೆ”ಎಂದು ಜಮೀರ್ ಹೇಳಿದರು.
“ನಾನು ಮತ್ತೆಮತ್ತೆ ಹೇಳುತ್ತಿದ್ದೇನೆ, ಕುಮಾರಸ್ವಾಮಿಯವರು ಯಾವುದೇ ಲಾಭವಿಲ್ಲದೇ ಯಾವುದೇ ಕೆಲಸವನ್ನು ಮಾಡುವವರಲ್ಲ. ಅವರು ಮಸ್ಕಿ ಮತ್ತು ಬೆಳಗಾವಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ”ಎಂದು ಆರೋಪಿಸಿದ್ದಾರೆ.