ಕೈ ತಪ್ಪಿದ ಆರ್ಎಸ್ಎಸ್ ಬೆಂಬಲ : ಮುಂದಿನ ಸಿಎಂ ರೇಸ್ ನಿಂದ ನಿರಾಣಿ ಔಟ್?
ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡುತ್ತಿದ್ದಂತೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಇಂದು ಬಿಎಸ್ ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಬಿಜೆಪಿ ಬಣದಲ್ಲಿ ಸಿಎಂ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು, ಈ ರೇಸ್ ನಲ್ಲಿ ಮುರುಗೇಶ್ ನಿರಾಣಿ ಹೆಸರು ಮುಂಚುಣಿಯಲ್ಲಿದೆ.
ಆದರೆ ಮುಂದಿನ ಸಿಎಂ ರೇಸ್ ನಿಂದ ಸಚಿವ ಮುರುಗೇಶ್ ನಿರಾಣಿ ಹೆಸರು ಔಟ್ ಆಗಿದೆ ಎನ್ನಲಾಗುತ್ತಿದೆ. ನಿರಾಣಿಗೆ ಆರ್ಎಸ್ಎಸ್ ನಾಯಕರು ಬೆಂಬಲ ನೀಡದ ಕಾರಣ ಅವರನ್ನು ಮುಂದಿನ ಸಿಎಂ ಸ್ಥಾನದ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಆದರೂ ಸಿಎಂ ಸ್ಥಾನಕ್ಕಾಗಿ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಯುತ್ತಿದೆ. ಹೈಕಮಾಂಡ್ ಯಾರಿಗೆ ಸಿಎಂ ಪಟ್ಟ ಕೊಡುತ್ತೆ ಎನ್ನುವ ಕುತೂಹಲ ಹುಟ್ಟುಹಾಕಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಸಿಎಂ ಅಶ್ವತ್ಥನಾರಾಯಣ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಶಾಸಕ ಅರವಿಂದ ಬೆಲ್ಲದ್ ಹೆಸರುಗಳು ಕೇಳಿಬರುತ್ತಿವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಕೂಡ ರೇಸ್ ನಲ್ಲಿದ್ದಾರೆ.