ಚಿರತೆ ಓಡಾಟದಿಂದ ಜೀವಭಯ! ಮನೆಯಿಂದ ಹೊರಬರಲು ಸ್ಥಳೀಯರಲ್ಲಿ ಆತಂಕ!
ನಗರದ ಬೇಗೂರು ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಕಾಣಿಸಿಕೊಂಡ ಚಿರತೆಯಿಂದಾಗಿ ಮನೆಯಿಂದ ಹೊರಬರಲು ಸ್ಥಳೀಯರು ಆತಂಕಗೊಂಡಿದ್ದಾರೆ. ಚಿರತೆ ಓಡಾಟದಿಂದ ಜನರಲ್ಲಿ ಜೀವ ಭಯ ಹೆಚ್ಚಾಗಿದೆ. ರಾತ್ರಿಯಾಗುತ್ತಿದ್ದಂತೆ ಚಿರತೆ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಒಳಗೆ ಪ್ರವೇಶಿಸಿದೆ. ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ.
9 ಟವರ್ ಗಳಿರುವ ಪ್ರೆಸ್ಟೀಜ್ ಭಾಗದಲ್ಲಿ ರಾತ್ರಿ ಹೊತ್ತು ಚಿರತೆ ಬಂದಿದೆ. ರಾತ್ರಿಯಾಗುತ್ತಿದ್ದಂತೆ ಚಿರತೆ ಬಂದು ಹೋಗುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಹೀಗಾಗಿ ಜನ ಮನೆಬಿಟ್ಟು ಹೊರಬರುತ್ತಿಲ್ಲ. ಸದಾ ಹೊರಗಡೆ ಆಟವಾಡುತ್ತಿದ್ದ ಮಕ್ಕಳು ಬೀದಿಗೆ ಬರುವುದಿಲ್ಲ. ತರಕಾರಿ ತರಲು, ಅಂಗಡಿಗಳಿಗೆ ಹೊಗಲು ಜನ ಹಗಲು ಹೊತ್ತು ಹೊರಬರಲು ಹೆದರುತ್ತಿದ್ದಾರೆ.
ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನ ಒಂದು ಭಾಗ 150 ವಿಸ್ತೀರ್ಣದ ಜಾಗದ ಕ್ವಾರಿ ಇದೆ. ಬನ್ನೇರ್ ಘಟ್ಟ ಅಭಯಾರಣ್ಯವೂ ಹತ್ತರವಿದೆ. ಅಲ್ಲಿಂದ ಚಿರತೆ ಬಂದಿರುವ ಶಂಕೆ ಇದೆ. ಸುತ್ತಮುತ್ತಲು ಪೊದೆ ಇರುವುದರಿಂದ ಚಿರತೆ ಅಲ್ಲಿ ಅವಿತುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ ಅರಣ್ಯ ಅಧಿಕಾರಿಗಳು ರಾತ್ರಿಹೊತ್ತು ಚಿರತೆಯನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲದೇ ಅಧಿಕಾರಿಗಳು ಸ್ಥಳೀಯರಲ್ಲಿ ಹಗಲು ಹೊತ್ತು ಚಿರತೆ ಬರುತ್ತೆ ಎನ್ನುವ ಭಯ ಮೂಡಿಸಿದ್ದಾರೆ. ಹೀಗಾಗಿ ಸ್ಥಳೀಯರಲ್ಲಿ ಹೆಚ್ಚಿನ ಭಯ ಶುರುವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಚಿರತೆಯನ್ನು ಆದಷ್ಟು ಬೇಗ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.