ದುರಹಂಕಾರ ಬಿಡಿ, ರೈತರ ಅಹವಾಲಿಗೆ ಸ್ಪಂದಿಸಿ: ಕೇಂದ್ರಕ್ಕೆ ರಾಹುಲ್ ಪಾಠ
ರೈತ ವಿರೋಧಿ ಕೃಷಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ, ಕೇಂದ್ರ ಸರ್ಕಾರದ ವಿರುದ್ದ ಗುಡುಗಿರುವ ರಾಹುಲ್ಗಾಂಧಿ, ದುರಹಂಕಾರ ಬಿಡಿ, ಎಚ್ಚೆತ್ತುಕೊಳ್ಳಿ, ರೈತರ ಅಹವಾಲಿಗೆ ಸ್ಪಂದಿಸಿ ಎಂದು ಹೇಳಿದ್ದಾರೆ.
ಅನ್ನದಾತರಿಗೆ ದೇಶದ ನಾವೆಲ್ಲರೂ ಋಣಿಗಳು. ಅವರಿಗೆ ನ್ಯಾಯ ಒದಗಿಸುವ ಮೂಲಕ ನಾವು ಅವರ ಋಣ ತೀರಿಸಬೇಕು ಎಂದು ರಾಹುಲ್ಗಾಂಧಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
‘ರೈತರು ರಸ್ತೆಗಳಲ್ಲಿ, ಬಯಲಲ್ಲಿ ಕುಳಿತಿದ್ದಾರೆ, ನೀವು ಟಿವಿಯಲ್ಲಿ ಭಾಷಣ ಮಾಡುತ್ತಿದ್ದೀರಿ. ನಾವೆಲ್ಲರೂ ರೈತರಿಗೆ ಋಣಿಗಳು, ಅವರಿಗೆ ನ್ಯಾಯ ಒದಗಿಸುವ ಮೂಲಕ, ಅವರ ಹಕ್ಕುಗಳನ್ನು ಅವರಿಗೆ ನೀಡುವ ಮೂಲಕ ನಾವು ಈ ಋಣ ತೀರಿಸಬೇಕು. ಇದರ ಬದಲು ನಾವು ಅವರ ಮೇಲೆ ದೌರ್ಜನ್ಯ ಎಸಗಬಾರದು, ಅಶ್ರುವಾಯು ಸಿಡಿಸಬಾರದು’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ಅಬ್ಬರಿಸಿದ್ದಾರೆ.
ಕೇಂದ್ರ ಸರ್ಕಾರವು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನಾನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಿದೆ. ಈ ನಡುವೆ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರುತ್ತಿದ್ದು, ರೈತರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ದಾರಿ ತಪ್ಪಿಸಿ ರಾಜಕೀಯದ ಆಟ ಆಡುತ್ತಿದೆ ಎಂದು ಕಿಡಿಕಾರಿದೆ.
अन्नदाता सड़कों-मैदानों में धरना दे रहे हैं,
और
‘झूठ’ टीवी पर भाषण!किसान की मेहनत का हम सब पर क़र्ज़ है।
ये क़र्ज़ उन्हें न्याय और हक़ देकर ही उतरेगा, न कि उन्हें दुत्कार कर, लाठियाँ मारकर और आंसू गैस चलाकर।
जागिए, अहंकार की कुर्सी से उतरकर सोचिए और किसान का अधिकार दीजिए।
— Rahul Gandhi (@RahulGandhi) December 1, 2020
ಉತ್ತರ ಪ್ರದೇಶ, ಉತ್ತರಾಖಂಡ್, ಕೇರಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿಯ ಗಡಿಭಾಗಗಳಾದ ಸಂಗು, ತಿಕ್ರಿ ಹಾಗೂ ಗಾಝಿಪುರಗಳಲ್ಲಿ ಬಿಡಾರ ಹೂಡಿದ್ದಾರೆ. ಕೇಂದ್ರದ ನೂತನ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳು ಸುದ್ದಿಯನ್ನು ಅವರೇ ಸೃಷ್ಟಿಸಿ ಪ್ರಸಾರ ಮಾಡುತ್ತಾರೆ: ಇವನ್ನೆಲ್ಲ ನಿರ್ಲಕ್ಷಿಸಿ: ವೈಎಸ್ವಿ ದತ್ತಾ