ರಾತ್ರಿ ರಾಜಕಾರಣ ಗೊತ್ತಿರೋದ್ರಿಂದ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿದ್ದಾರೆ: ಬಿಜೆಪಿ ಮಾಜಿ ಶಾಸಕ ಮಹಿಳಾ ವಿರೋಧಿ ಹೇಳಿಕೆ
‘‘ರಾತ್ರಿ ರಾಜಕಾರಣದ ಸಂಸ್ಕೃತಿ ತಿಳಿದಿರುವುದರಿಂದಲೇ ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಾಸಕಿಯಾಗಿದ್ದಾರೆ” ಎಂದು ಬಿಜೆಪಿ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಚುನಾವಣೆಗೆ ಮುನ್ನ, ನಾನು ನಿಮ್ಮ ಮನೆ ಮಗಳು ಎಂದು ಹಲವು ಕನಸುಗಳನ್ನು ತೋರಿಸಿದ್ದರು. ಆದರೆ ಕನಸುಗಳನ್ನು ನನಸು ಮಾಡಲಾಗಿಲ್ಲ. ಹೀಗಾಗಿ ಕ್ಷೇತ್ರದ ಜನರು ಪ್ರತಿಕ್ರಿಯೆ ಕೊಡಲು ಆರಂಭಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಜನರು ಪ್ರತಿಕ್ರಿಯೆ ನೀಡುತ್ತಿರುವಾಗ ಅದು ಬಿಜೆಪಿಯವರು ಎಂದು ಹೇಳುತ್ತಿದ್ದೀರಿ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು. ರಾತ್ರಿ ರಾಜಕೀಯ ಸಂಸ್ಕೃತಿ ತಿಳಿದಿರುವುದರಿಂದಲೆ ನೀವು ಶಾಸಕಿ ಆಗಿದ್ದೀರಿ. ನೀವು ಕೆಲಸ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. ಪ್ರತಿಯೊಬ್ಬರೂ ಶಾಸಕರು ಸಂಸದರಿಗೆ ಕೆಲವೊಂದು ಯೋಜನೆಗಳಿದೆ. ಕ್ಷೇತ್ರದಲ್ಲಿ ಹೇಳುತ್ತಿರುವ ಅಭಿವೃದ್ಧಿ ಹೊಳೆ ಎಲ್ಲಿದೆ ಎನ್ನುವುದನ್ನು ಹೇಳಿದರೆ ನಾನೂ ನೋಡಿಕೊಂಡು ಬರುತ್ತೇನೆ” ಎಂದು ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ದಸರಾ ರಜೆಯ ನಂತರ 1-5 ತರಗತಿಗಳನ್ನು ತೆರೆಯಲು ಶಿಕ್ಷಣ ಇಲಾಖೆ ಸಿದ್ದತೆ!
ಸಂಜಯ ಪಾಟೀಲ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದರು ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ. ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ 2 ನೇ ಅವತಾರವಾಗಿರುವ ಸಂಜಯ ಪಾಟೀಲರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, “ಆ ಕ್ಷೇತ್ರದ ಜನ ಯಾರಿಗೆ ಎಷ್ಟು ಮತ ನೀಡಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ. ಮುಂದೆಯೂ ಜನರೇ ಉತ್ತರ ನೀಡುತ್ತಾರೆ” ಎಂದಿದ್ದಾರೆ.
ಇಷ್ಟು ವರ್ಷಗಳು ಆದ ಮೇಲೆಯೂ ಕರ್ನಾಟಕಕ್ಕೆ ಒಬ್ಬರು ಮಹಿಳಾ ಮುಖ್ಯಮಂತ್ರಿಯನ್ನು ಪಡೆಯಲಾಗಲಿಲ್ಲ. ಜೊತೆಗೆ ಮಹಿಳೆಯರು ರಾಜಕಾರಣಕ್ಕೆ ಬಂದರೆ ಇವರೆಲ್ಲ ಹೇಗೆ ನಾಲಗೆ ಹರಿಯಬಿಡುತ್ತಾರೆ ಗಮನಿಸಿ. ಈ ಸಂಜಯ ಪಾಟೀಲರನ್ನು ಬಿಜೆಪಿ ಕೂಡಲೇ ಪಕ್ಷದಿಂದ ಹೊರಹಾಕಬೇಕು ಮತ್ತು ಮಾಡಿದ ತಪ್ಪಿಗೆ ಹೆಬ್ಬಾಳ್ಕರ್ ಅವರ ಕ್ಷಮೆ ಕೇಳಬೇಕು. ಇದೇನಾ ಇವರು ನಾಡಿಗೆ ಕಲಿಸುವ ಸಂಸ್ಕೃತಿ! ಎಂದು ಸಾಮಾಜಿಕ ಜಾಲತಾಣಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಾನಗಲ್ ಬೈ ಎಲೆಕ್ಷನ್: ಜೆಡಿಎಸ್ ಅಭ್ಯರ್ಥಿ ಘೋಷಣೆ; ನಿಯಾಜ್ ಶೇಕ್ ಕಣಕ್ಕೆ!